ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ | ಎಸ್‌ಎಚ್‌ಜಿ ಹಣಕಾಸು ನೆರವು: ಕೆಲ ರಾಜ್ಯಗಳಿಗೆ ಸಿಂಹಪಾಲು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವರದಿ ಅಭಿಪ್ರಾಯ
Last Updated 18 ಜುಲೈ 2022, 19:38 IST
ಅಕ್ಷರ ಗಾತ್ರ

ಸ್ವಸಹಾಯ ಸಂಘಗಳ ಚಟುವಟಿಕೆಗಳನ್ನು ದೇಶದಾದ್ಯಂತ ವಿಸ್ತರಿಸುವ ಯತ್ನದ ಹೊರತಾಗಿಯೂ, ಅವುಗಳಿಗೆ ನೀಡುವ ಸಾಲದ ಪಾಲು ಕೆಲವೇ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ ಎಸ್‌ಬಿಐ ವರದಿ ಅಭಿಪ್ರಾಯಪಟ್ಟಿದೆ

***

ಎಸ್‌ಎಚ್‌ಜಿ: 10 ರಾಜ್ಯಗಳಿಗೆ ಶೇ 95ರಷ್ಟು ಹಣ ಹಂಚಿಕೆ

ಆರ್ಥಿಕ ಸಬಲೀಕರಣ ಉದ್ದೇಶಕ್ಕಾಗಿ ರೂಪುಗೊಂಡ ಸ್ವಸಹಾಯ ಸಂಘಗಳು (ಎಸ್‌ಎಚ್‌ಜಿ) ದೇಶದ ಗ್ರಾಮೀಣ ಹಾಗೂ ಅರೆನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಕೇಂದ್ರೀಕೃತವಾಗಿವೆ. ಅವುಗಳಿಗೆ ಸಾಲದ ರೂಪದಲ್ಲಿ ಹಣಕಾಸಿನ ನೆರವು ಒದಗಿಸಲಾಗುತ್ತದೆ. ಸ್ವಸಹಾಯ ಸಂಘಗಳ ಚಟುವಟಿಕೆಗಳನ್ನು ದೇಶದಾದ್ಯಂತ ವಿಸ್ತರಿಸುವ ಯತ್ನದ ಹೊರತಾಗಿಯೂ, ಅವುಗಳಿಗೆ ನೀಡುವ ಸಾಲದ ಪಾಲು ಕೆಲವೇ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವರದಿ ಅಭಿಪ್ರಾಯಪಟ್ಟಿದೆ. ದೇಶದ 10 ರಾಜ್ಯಗಳ ಸ್ವಸಹಾಯ ಸಂಘಗಳು ಶೇ 95ಕ್ಕೂ ಹೆಚ್ಚು ಸಾಲದ ನೆರವು ಪಡೆದಿವೆ. ಈ ಪಟ್ಟಿಯಲ್ಲಿ ಆಂಧ್ರಪ್ರದೇಶ ಮುಂಚೂಣಿಯಲ್ಲಿದ್ದು ಇಲ್ಲಿನ ಎಸ್‌ಎಚ್‌ಜಿಗಳು ಶೇ 33ರಷ್ಟು ಹಣವನ್ನು ಸಾಲವಾಗಿ ಪಡೆದಿವೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕವು ಶೇ 13ರಷ್ಟು ಪಾಲು ಹೊಂದಿದೆ.

ಅತಿಹೆಚ್ಚು ಹಣ ಪಡೆದ ರಾಜ್ಯಗಳು

ಆಂಧ್ರ ಪ್ರದೇಶ;33%

ಕರ್ನಾಟಕ;13%

ತೆಲಂಗಾಣ;12%

ಪಶ್ಚಿಮ ಬಂಗಾಳ;10%

ತಮಿಳುನಾಡು;8%

ಬಿಹಾರ;7%

ಕೇರಳ;4%

ಒಡಿಶಾ;4%

ಮಹಾರಾಷ್ಟ್ರ;3%

ಜಾರ್ಖಂಡ್;1%

ಉಳಿದ ರಾಜ್ಯಗಳು;5%

-----------------

ಬದಲಾದ ನೀತಿ: ಬಿಹಾರಕ್ಕೆ ಹೆಚ್ಚು ಹಣ

ಸರ್ಕಾರದ ಕೆಲವು ನೀತಿಗಳ ಜಾರಿಯಿಂದ ಸಾಲದ ಹಣ ಹಂಚಿಕೆ ವಿಧಾನದಲ್ಲಿ ಬದಲಾವಣೆಯಾಗಿದೆ. ಹಾಗಾಗಿ, 2021–22ನೇ ಸಾಲಿನಲ್ಲಿಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ ರಾಜ್ಯಗಳಿಗೆ ಸಿಂಹಪಾಲು ಸಿಕ್ಕಿಲ್ಲ.ಬದಲಿಗೆ ಇತರ ರಾಜ್ಯಗಳಿಗೆ ಅಧಿಕ ಹಣ ಹಂಚಿಕೆಯಾಗಿದೆ.ಈ ಅವಧಿಯಲ್ಲಿ ಹಣಕಾಸು ನೆರವು ಒದಗಿಸಲಾದ ಸುಮಾರು 8 ಲಕ್ಷ ಸ್ವಸಹಾಯ ಸಂಘಗಳ ಪೈಕಿ ಬಿಹಾರದ ಎಸ್‌ಎಚ್‌ಜಿಗಳು (ಶೇ 16) ಅಧಿಕ ಪಾಲು ಪಡೆದಿವೆ. ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ (ಶೇ 12), ಪಶ್ಚಿಮ ಬಂಗಾಳ (ಶೇ12) ರಾಜ್ಯಗಳಿವೆ.

2021–22ರಲ್ಲಿ ಹಣ ಪಡೆದ ರಾಜ್ಯಗಳು

ಬಿಹಾರ;16%

ಉತ್ತರ ಪ್ರದೇಶ;12%

ಪಶ್ಚಿಮ ಬಂಗಾಳ;12%

ಮಧ್ಯಪ್ರದೇಶ;10%

ಮಹಾರಾಷ್ಟ್ರ;8%

ಅಸ್ಸಾಂ;7%

ಗುಜರಾತ್;6%

ಒಡಿಶಾ;6%

ರಾಜಸ್ಥಾನ;5%

ಛತ್ತೀಸಗಡ;4%

ಇತರೆ ರಾಜ್ಯಗಳು;14%

–––––––––

ಗ್ರಾಮೀಣ, ಅರೆನಗರಗಳಲ್ಲಿ ಸ್ವಸಹಾಯ ಸಂಘಗಳು ಕೇಂದ್ರೀಕೃತ

ಗ್ರಾಮೀಣ ಪ್ರದೇಶ;48%

ಅರೆನಗರ ಪ್ರದೇಶ;44%

ನಗರ ಪ್ರದೇಶ;7%

ಮೆಟ್ರೊ ನಗರ ಪ್ರದೇಶ;1%

–––––––––

ಆಂಧ್ರ, ತೆಲಂಗಾಣಕ್ಕೆ ಭರಪೂರ ಹಣ ಹಂಚಿಕೆ

ಸ್ವಸಹಾಯ ಸಂಘಗಳಿಗೆ ನೀಡಲಾದ ಸಾಲದ ಹಣದ ಪ್ರಮಾಣವನ್ನು ವಿಶ್ಲೇಷಿಸಿದಾಗ, ಶೇ 60ಕ್ಕೂ ಅಧಿಕ ಪ್ರಮಾಣದ ಹಣವು ದೇಶದ 25 ಜಿಲ್ಲೆಗಳಿಗೆ ವಿತರಣೆಯಾಗಿದೆ ಎಂದು ವರದಿ ತಿಳಿಸಿದೆ. ಈ ಪೈಕಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೇ ಅತ್ಯಧಿಕ ಜಿಲ್ಲೆಗಳು ಇವೆ. ಅತಿಹೆಚ್ಚು ಹಣ ನೀಡಲಾದ ಮೊದಲ 25 ಜಿಲ್ಲೆಗಳನ್ನು ಪರಿಗಣಿಸಿದರೆ, ಕರ್ನಾಟಕದ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಪಶ್ಚಿಮ ಬಂಗಾಳದ ಒಂದು ಜಿಲ್ಲೆಯನ್ನು ಬಿಟ್ಟರೆ, ಉಳಿದ ಜಿಲ್ಲೆಗಳು ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿಯೇ ಇರುವುದು ವಿಶೇಷ.

ಎಸ್‌ಎಚ್‌ಜಿ: ಹಣ ಹಂಚಿಕೆಯಾದ ಅಗ್ರ 25 ಜಿಲ್ಲೆಗಳು

ಪಶ್ಚಿಮ ಗೋದಾವರಿ

ಪೂರ್ವ ಗೋದಾವರಿ

ಗುಂಟೂರು

ಕೃಷ್ಣಾ

ವಿಶಾಖಪಟ್ಟಣ

ಪ್ರಕಾಶಂ

ದಕ್ಷಿಣ ಕನ್ನಡ

ಅನಂತಪುರ

ಚಿತ್ತೂರು

ವೈಎಸ್‌ಆರ್

ಕರ್ನೂಲು

ವಿಜಯನಗರಂ

ಶ್ರೀಕಾಕುಳಂ

ಉತ್ತರ ಕನ್ನಡ

ಪೊಟ್ಟಿ ಶ್ರೀರಾಮುಲು ನೆಲ್ಲೂರು

ನಿಜಾಮಾಬಾದ್

ನಲ್ಗೊಂಡ

ವರಂಗಲ್ ಗ್ರಾಮೀಣ

ಖಮ್ಮಂ

ಸಂಗಾರೆಡ್ಡಿ

ಸೂರ್ಯಪೇಟೆ

ರಂಗಾರೆಡ್ಡಿ

ಸಿದ್ದಿಪೇಟೆ

ಪೆದ್ದಪಲ್ಲಿ

ಪೂರ್ವ ಮೇದಿನಿಪುರ

––––––––––

ಕರ್ನಾಟಕ: ಐದು ಜಿಲ್ಲೆಗಳಿಗೆ ಶೇ 83ರಷ್ಟು ಹಣ ಹಂಚಿಕೆ

ಸಾಲದ ರೂಪದಲ್ಲಿ ಹಂಚಿಕೆ ಮಾಡಲಾದ ಹಣದಲ್ಲಿ ಅತಿ ಹೆಚ್ಚನ್ನು ಪಡೆದು ಐದು ರಾಜ್ಯಗಳಲ್ಲಿ ಆಂಧ್ರ ಪ್ರದೇಶ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಇವೆ. ಈ ರಾಜ್ಯಗಳಲ್ಲಿ ಅತಿಹೆಚ್ಚು ಹಣ ಹಂಚಿಕೆಯಾದ ಜಿಲ್ಲೆಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ಪೈಕಿ ಕರ್ನಾಟಕದ ಐದು ಜಿಲ್ಲೆಗಳಿಗೆ ಅತ್ಯಧಿಕ ಮೊತ್ತ ದಕ್ಕಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ತುಮಕೂರು, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಗಳಿಗೆ ಒಟ್ಟು ಹಣದ ಶೇ 83ರಷ್ಟು ವಿತರಣೆಯಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ತಲಾ ಐದು ಜಿಲ್ಲೆಗಳಿಗೆ ಶೇ 50ಕ್ಕೂ ಹೆಚ್ಚು ಹಣವನ್ನು ನೀಡಲಾಗಿದೆ.

ಒಟ್ಟು ಹಂಚಿಕೆಯಲ್ಲಿ 5 ಜಿಲ್ಲೆಗಳು ಪಡೆದ ಮೊತ್ತದ ಪ್ರಮಾಣ

ಕರ್ನಾಟಕ;83% (ದಕ್ಷಿಣ ಕನ್ನಡ, ಉತ್ತರ ಕನ್ನಡ, ತುಮಕೂರು, ಚಾಮರಾಜನಗರ, ಮೈಸೂರು)

ಆಂಧ್ರಪ್ರದೇಶ;60%

ತೆಲಂಗಾಣ;28%

ಪಶ್ಚಿಮ ಬಂಗಾಳ;43%

ತಮಿಳುನಾಡು;52%

–––––––

3 ರಾಜ್ಯಗಳಲ್ಲಿ ಶೇ 25ಕ್ಕೂ ಹೆಚ್ಚು ಎನ್‌ಪಿಎ

ಸ್ವಸಹಾಯ ಸಂಘಗಳಿಗೆ ಹಂಚಿಕೆ ಮಾಡಲಾದ ಹಣ ಸಾಲದ ರೂಪದಲ್ಲಿದ್ದು, ಕೆಲವು ರಾಜ್ಯಗಳು ಸಾಲ ಮರುಪಾವತಿಯಲ್ಲಿ ಹಿಂದೆ ಬಿದ್ದಿದ್ದರೆ, ಇನ್ನೂ ಕೆಲವು ರಾಜ್ಯಗಳು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸಿವೆ. ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣವು ಉತ್ತರ ಪ್ರದೇಶ, ಹರಿಯಾಣ ಹಾಗೂ ಪಂಜಾನ್‌ನಲ್ಲಿ ಶೇ 25ಕ್ಕೂ ಅಧಿಕವಾಗಿದೆ ಎಂದು ವರದಿ ತಿಳಿಸಿದೆ. ಅರುಣಾಚಲ ಪ್ರದೇಶ ಹಾಗೂ ತ್ರಿಪುರಾ ರಾಜ್ಯಗಳ ಎನ್‌ಜಿಒಗಳೂ ಸಾಲ ಮರುಪಾವತಿಯಲ್ಲಿ ಹಿಂದಿವೆ. ಆಂಧ್ರಪ್ರದೇಶವು ಅತಿಕಡಿಮೆ (ಶೇ 0.8) ಎನ್‌ಪಿಎ ಹೊಂದಿದೆ.

ಎಸ್‌ಎಚ್‌ಜಿಗಳಿಂದ ವಸೂಲಾಗದ ಸಾಲ

ಉತ್ತರ ಪ್ರದೇಶ;29.8%

ಹರಿಯಾಣ;26.6%

ಪಂಜಾಬ್;26%

ಅರುಣಾಚಲ ಪ್ರದೇಶ;19.8%

ತ್ರಿಪುರಾ;18%

ಮಿಜೋರಾಂ;2.9%

ಪಶ್ಚಿಮ ಬಂಗಾಳ;2.3%

ಜಮ್ಮು–ಕಾಶ್ಮೀರ;1.8%

ಸಿಕ್ಕಿಂ;1.6%

ಆಂಧ್ರಪ್ರದೇಶ;0.8%

–––––––––––

ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಪ್ರಗತಿ

ಅಭಿವೃದ್ಧಿಯ‌ಲ್ಲಿ ಹಿಂದುಳಿದಿರುವ ದೇಶದ 124 ಜಿಲ್ಲೆಗಳನ್ನು ಗುರುತಿಸಿ, ಅವುಗಳ ಸಮಗ್ರ ಅಭಿವೃದ್ಧಿಗೆ ನೆರವಾಗುವ ‘ಮಹತ್ವಾಕಾಂಕ್ಷಿ ಜಿಲ್ಲೆಗಳ ಯೋಜನೆ’ಯನ್ನು ಕೇಂದ್ರ ಸರ್ಕಾರವು 2018ರಲ್ಲಿ ಜಾರಿಗೆ ತಂದಿತ್ತು. ಈ ಯೋಜನೆ ಜಾರಿಗೆ ಬಂದ ಬಳಿಕ, ಸ್ವಸಹಾಯ ಸಂಘಗಳಿಗೆ ಹಣಕಾಸು ಹಂಚಿಕೆ ಮಾಡುವ ವಿಚಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ ಎಂದು ವರದಿ ಹೇಳಿದೆ. ದೇಶದ ಎಸ್‌ಎಚ್‌ಜಿಗಳಿಗೆ ಹಂಚಿಕೆಯಾದ ಹಣದ ಪೈಕಿ ಶೇ 18ರಷ್ಟು ಹಣ ಈ ಜಿಲ್ಲೆಗಳಿಗೆ ಹಂಚಿಕೆಯಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಿವೆ. ಜಾರ್ಖಂಡ್‌ನ ಅತಿಹೆಚ್ಚು, ಅಂದರೆ 19 ಜಿಲ್ಲೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT