‘ಸ್ವಂತ ಮನೆ ಹೊಂದಬೇಕು’ ಎಂಬ ಕನಸು ಪ್ರತಿ ಕುಟುಂಬಕ್ಕೂ ಇರುತ್ತದೆ. ಸರ್ಕಾರದ ನೆರವು ಇಲ್ಲದಿದ್ದರೆ ಬಡವರು, ನಿವೇಶನರಹಿತರಿಗೆ ಈ ಕನಸು ಸಾಕಾರವಾಗುವುದು ಕಷ್ಟ. ಭಾರತದಲ್ಲಿ ವಸತಿರಹಿತರ ಸಂಖ್ಯೆ ದೊಡ್ಡದಿದೆ. ದೇಶದ ಗ್ರಾಮೀಣ ಭಾಗದ ಬಡವರಿಗೆ ವಸತಿ ಸೌಕರ್ಯ ಕಲ್ಪಿಸಲು ನೆರವಾಗುವುದಕ್ಕಾಗಿ ಕೇಂದ್ರ ಸರ್ಕಾರ ಪಿಎಂಎವೈ–ಜಿ ಅನುಷ್ಠಾನಗೊಳಿಸಿದೆ. ‘ಎಲ್ಲರಿಗೂ ಸೂರು’ ಎಂಬುದು ಇದರ ಆಶಯ. ಹಣದುಬ್ಬರ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಯೋಜನೆ ಅಡಿ ಸರ್ಕಾರ ನೀಡುತ್ತಿರುವ ಆರ್ಥಿಕ ನೆರವು ಮನೆ ಕಟ್ಟಲು ಸಾಕಾಗುತ್ತಿಲ್ಲ. ಇದರಿಂದ ಯೋಜನೆ ಅನುಷ್ಠಾನ ವಿಳಂಬವಾಗುತ್ತಿದೆ ಎಂದು ಸಂಸದೀಯ ಸ್ಥಾಯಿ ಸಮಿತಿಯೊಂದು ಪ್ರತಿಪಾದಿಸಿದೆ