ಐದನೇ ಆವೃತ್ತಿಯ ‘ಚಿರತೆಗಳ ಸ್ಥಿತಿಗತಿ ವರದಿ–2022’ ಗುರುವಾರ ಬಿಡುಗಡೆಯಾಗಿದೆ. ನಾಲ್ಕು ವರ್ಷಗಳಿಗೆ ಒಮ್ಮೆ ಬರುವ ಈ ವರದಿಯು ಕಳೆದ ಬಾರಿ 2018ರಲ್ಲಿ ಬಂದಿತ್ತು. ಹಿಂದಿನ ಬಾರಿಯ ಹೋಲಿಕೆಯಲ್ಲಿ ದೇಶದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದೆ. 2018ರಲ್ಲಿ ದೇಶದಲ್ಲಿ ಒಟ್ಟು 12,852 ಚಿರತೆ ಗಳಿದ್ದವು. ಈ ಸಂಖ್ಯೆಯು ಈ ಬಾರಿ 13,874ಕ್ಕೆ ಏರಿಕೆಯಾಗಿದೆ. ಮಧ್ಯ ಪ್ರದೇಶದಲ್ಲಿ 3,907 ಚಿರತೆಗಳಿವೆ. ಆದ್ದರಿಂದ, ಮಧ್ಯಪ್ರದೇಶವು ಹೆಚ್ಚು ಚಿರತೆಗಳಿರುವ ರಾಜ್ಯ ಎನಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (1,985), ಮೂರನೇ ಸ್ಥಾನದಲ್ಲಿ ಕರ್ನಾಟಕ (1,879) ಹಾಗೂ ನಾಲ್ಕನೇ ಸ್ಥಾನದಲ್ಲಿ ತಮಿಳುನಾಡು (1,070) ಇವೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆಗೂಡಿ ಈ ವರದಿಯನ್ನು ಸಿದ್ಧಪಡಿಸಿವೆ. ಇವರೊಂದಿಗೆ ಆಯಾ ರಾಜ್ಯಗಳ ಅರಣ್ಯ ಇಲಾಖೆಗಳೂ ಕೈಜೋಡಿಸಿವೆ. ಈ ವರದಿಯನ್ನು ಸಿದ್ಧಪಡಿಸಲು ಒಟ್ಟು 20 ರಾಜ್ಯಗಳನ್ನು ಸುತ್ತಾಡಲಾಗಿದೆ. ಒಟ್ಟು 6.41 ಲಕ್ಷ ಚದರ ಕಿ.ಮೀ. ಉದ್ದವನ್ನು ನಡಿಗೆಯಲ್ಲಿ ಕ್ರಮಿಸಲಾಗಿದೆ. 32,803 ಕಡೆಗಳಲ್ಲಿ ಕ್ಯಾಮೆರಾಗಳನ್ನು ಇಡಲಾಗಿತ್ತು. ಜೊತೆಗೆ, ಈ ಎಲ್ಲ ಕಾರ್ಯಕ್ಕಾಗಿ 6.41 ಲಕ್ಷ ಮಾನವ ದಿನಗಳನ್ನು ತೆಗೆದುಕೊಳ್ಳಲಾಗಿದೆ. ವನ್ಯಜೀವಿಗಳ ಸಂಬಂಧ ವರದಿಯೊಂದನ್ನು ಸಿದ್ಧಪಡಿಸಲು ಇಷ್ಟೊಂದು ಹೆಚ್ಚಿನ ಅವಧಿ ತೆಗೆದುಕೊಂಡ ಮೊದಲ ವರದಿ ಇದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಚಿರತೆಗಳು, ಅವುಗಳ ವರ್ತನೆಗಳು, ಇತಿಹಾಸಗಳ ಕುರಿತು ಹೆಚ್ಚಿನ ಅಧ್ಯಯನ ನಡೆಸಬೇಕು ಎಂಬುದನ್ನು ವರದಿಯಲ್ಲಿ ಮುಖ್ಯವಾಗಿ ಹೇಳಲಾಗಿದೆ. ಮಾನವ–ಚಿರತೆ ಸಂರ್ಘರ್ಷವು ಅಧಿಕಗೊಳ್ಳುತ್ತಿದೆ. ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮನಷ್ಯರು ಚಿರತೆಗಳನ್ನು ಕೊಲ್ಲುತ್ತಿದ್ದಾರೆ. ಜನರಿಗೆ ಚಿರತೆಯ ಕುರಿತು ಹೆಚ್ಚಿನ ಮಾಹಿತಿಗಳಿಲ್ಲ. ಇದೇ ಕಾರಣಕ್ಕೆ ಅವುಗಳನ್ನು ಕೊಲ್ಲಲಾಗುತ್ತಿದೆ. ಇದು ನಿಲ್ಲಬೇಕು ಎಂದರೆ, ಚಿರತೆಗಳ ಕುರಿತು ಹೆಚ್ಚು ಅಧ್ಯಯನ ನಡೆಯಬೇಕು ಮತ್ತು ಜನರಿಗೆ ಚಿರತೆಗಳ ವರ್ತನೆ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.
ದೇಶವನ್ನು ನಾಲ್ಕು ವಲಯಗಳಲ್ಲಿ ವಿಭಜಿಸಿ ವರದಿಯನ್ನು ಸಿದ್ಧಪಡಿ ಸಲಾಗಿದೆ. ಶಿವಾಲಿಕ್ ಪರ್ವತ ಮತ್ತು ಗಂಗಾ ನದಿ ಬಯಲು ಪ್ರದೇಶ, ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳು, ಪಶ್ಚಿಮ ಘಟ್ಟಗಳು ಹಾಗೂ ಈಶಾನ್ಯ ಪರ್ವತ ಮತ್ತು ಬ್ರಹ್ಮಪುತ್ರ ಬಯಲು ಪ್ರದೇಶ– ಇವೇ ಆ ನಾಲ್ಕು ವಲಯಗಳು. ಗಂಗಾ ನದಿ ಬಯಲು ಪ್ರದೇಶವನ್ನು ಹೊರತುಪಡಿಸಿ ಉಳಿದೆಲ್ಲಾ ವಲಯಗಳಲ್ಲೂ ಚಿರತೆಗಳ ಸಂಖ್ಯೆಯು ಅಧಿಕಗೊಂಡಿದೆ. ದೇಶದ ಎಲ್ಲ ಹುಲಿ ಸಂರಕ್ಷಿತ ಪ್ರದೇಶ ಗಳಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ. ಹುಲಿ ಸಂರಕ್ಷಿತ ಯೋಜನೆಗಳ ಅನುಷ್ಠಾನವು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಚಿರತೆಗಳೂ ಅಧಿಕಗೊಂಡಿವೆ.
ಅರಣ್ಯಗಳಲ್ಲಿ ಮಾನವ ಚಟುವಟಿಕೆಗಳು ಅಧಿಕಗೊಳ್ಳುತ್ತಾ, ಕಾಡು ಸಣ್ಣದಾಗ ತೊಡಗಿದೆ. ಇದೇ ಕಾರಣಕ್ಕೆ ಚಿರತೆಗಳು ಕಾಡು ಅಂಚಿನ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳತೊಡಗಿದೆ. ಸಂರಕ್ಷಿತ ಪ್ರದೇಶಗಳ ಒಳಗೆ ಇರುವ ಚಿರತೆಗಳ ಸಂಖ್ಯೆಗಿಂತ, ಈ ಪ್ರದೇಶಗಳ ಹೊರವಲಯಗಳಲ್ಲಿ ಇರುವ ಚಿರತೆಗಳ ಸಂಖ್ಯೆಯೇ ಅಧಿಕವಾಗಿದೆ. ಇದೇ ಸಂರ್ಘರ್ಷಕ್ಕೆ ಮುಖ್ಯ ಕಾರಣ. ಉತ್ತರಾಖಂಡ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಚಿರತೆಗಳು ಗ್ರಾಮಗಳನ್ನು ಬಿಟ್ಟು ನಗರ ಪ್ರದೇಶಕ್ಕೂ ತಮ್ಮ ಓಡಾಟವನ್ನು ಆರಂಭಿಸಿವೆ. ಉತ್ತರ ಪ್ರದೇಶದ ಸಮಸ್ಯೆ ಬೇರೆಯದೇ ಇದೆ. ಸಂರಕ್ಷಿತ ಪ್ರದೇಶದ ವಿಸ್ತೀರ್ಣವು ಕಡಿಮೆ ಇರುವ ಕಾರಣ, ಜನವಸತಿಯು ಸಂರಕ್ಷಿತ ಪ್ರದೇಶದ ಅಂಚಿಗೆ ಬರುತ್ತವೆ. ಈ ಕಾರಣಕ್ಕಾಗಿ ಸಂಘರ್ಷ ಏರ್ಪಡುತ್ತಿದೆ.
ಮಧ್ಯ ಭಾರತ ವಲಯದಲ್ಲಿನ ಹುಲಿ ಸಂರಕ್ಷಿತ ಪ್ರದೇಶ ಗಳಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿದೆ. ಹುಲಿ ಸಂರಕ್ಷಿತ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ ಇದು ಸಾಧ್ಯವಾಗಿದೆ. ಹಾಗಿದ್ದರೂ, ಚಿರತೆಗಳ ಸಾವಿನ ಸಂಖ್ಯೆಯೂ ಅಧಿಕವಾಗಿಯೇ ಇದೆ. ಚಿರತೆಗಳ ಆವಾಸಸ್ಥಾನ ಕುಗ್ಗಿದೆ. ಕಲ್ಲಿದ್ದಲು ಗಣಿಗಾರಿಕೆಯು ಹೆಚ್ಚಾಗಿದೆ. ಈ ವಲಯದಲ್ಲಿ ಅಧಿಕ ಆರ್ಥಿಕ ಪ್ರದೇಶಗಳಿವೆ. ಇವುಗಳ ಮಧ್ಯೆ ಸಂಪರ್ಕ ಸಾಧಿಸಲು ದೊಡ್ಡ ದೊಡ್ಡ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಚಿರತೆಗಳು ರಸ್ತೆ ಅಪಘಾತಗಳಲ್ಲಿ ಹೆಚ್ಚಾಗಿ ಮೃತಪಡುತ್ತಿವೆ.
ಈಶಾನ್ಯ ಪರ್ವತ ಮತ್ತು ಬ್ರಹ್ಮಪುತ್ರ ಬಯಲು ಪ್ರದೇಶಗಳಲ್ಲಿ ಕಾಡುಗಳು ಹೆಚ್ಚು ಚದುರಿದಂತಿವೆ. ಕಾಡಿನ ಮಧ್ಯೆಯೇ ಜನವಸತಿಯೂ ಇದೆ. ಇದೇ ಕಾರಣಕ್ಕಾಗಿ ಈ ವಲಯದಲ್ಲಿ ಮಾನವ–ಚಿರತೆ ಸಂಘರ್ಷ ಹೆಚ್ಚಿನ ಸಂಖ್ಯೆಯಲ್ಲಿದೆ.
l ಚಿರತೆಗಳ ಆವಾಸಸ್ಥಾನಗಳನ್ನು ಮರುಸ್ಥಾಪಿಸಬೇಕು ಮತ್ತು ಅವುಗಳನ್ನು ಸಂರಕ್ಷಿಸಬೇಕು
l ಸಂರಕ್ಷಿತ ಪ್ರದೇಶಗಳ ಹೊರವಲಯಗಳಲ್ಲಿ ರಕ್ಷಣೆ ವ್ಯವಸ್ಥೆ ರೂಪಿಸಬೇಕು
l ಮಾನವ–ಚಿರತೆ ಸಂಘರ್ಷವನ್ನು ತಗ್ಗಿಸಲು ಕ್ರಮ ಕೈಗೊಳ್ಳಬೇಕು
l ಅರಣ್ಯ ಪ್ರದೇಶಗಳ ಸುತ್ತಮುತ್ತ ವಾಸಿಸುವ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಕೈಜೋಡಿಸಿ, ಜಾಗೃತಿ ಕಾರ್ಯ ಕ್ರಮಗಳನ್ನು ರೂಪಿಸಬೇಕು ಮತ್ತು ಸಹಬಾಳ್ವೆಯ ಕುರಿತೂ ಅರಿವು ಮೂಡಿಸಬೇಕು
l ಚಿರತೆಗಳ ಪರಿಸರ, ವರ್ತನೆ, ಚಿರತೆಗಳ ಎಲ್ಲೆಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾವೆ ಎನ್ನುವ ನಿಖರ ಮಾಹಿತಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಆಗ ಮಾತ್ರವೇ ಅವುಗಳ ಸಂರಕ್ಷಣೆಗೆ ಯೋಜನೆಗಳನ್ನು ರೂಪಿಸಬಹುದು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.