ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರ ರಾಜ್ಯ: ತೂಗುಗತ್ತಿಯಡಿ ಜಾರ್ಖಂಡ್‌ ಸರ್ಕಾರ

Last Updated 26 ಆಗಸ್ಟ್ 2022, 6:59 IST
ಅಕ್ಷರ ಗಾತ್ರ

ಈಚಿನ ದಿನಗಳಲ್ಲಿ ಜಾರ್ಖಂಡ್‌ ಸರ್ಕಾರವು ಒಂದಲ್ಲ ಒಂದು ಬಿಕ್ಕಟ್ಟನ್ನು ಎದುರಿಸುತ್ತಿದೆ. ಆ ಎಲ್ಲಾ ಬಿಕ್ಕಟ್ಟುಗಳು ಸರ್ಕಾರವನ್ನು ಉರುಳಿಸಲು ನಡೆಸಲಾಗುತ್ತಿರುವ ಸಂಚಿನ ಭಾಗ ಎಂದು ಆಡಳಿತಾರೂಢ ಮೈತ್ರಿಕೂಟದ ಎಲ್ಲಾ ಪಕ್ಷಗಳು ಆರೋಪಿಸುತ್ತಿವೆ. ಈ ಸಂಚಿನ ಸೂತ್ರಧಾರ ಎಂದು ಈ ಪಕ್ಷಗಳು ಬಿಜೆಪಿಯುತ್ತ ಬಹಿರಂಗವಾಗಿಯೇ ಬೊಟ್ಟು ಮಾಡುತ್ತಿವೆ. ಬಿಜೆಪಿ ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿದೆ. ಆದರೆ, ಸರ್ಕಾರವು ಮತ್ತೆ ಮತ್ತೆ ಬಿಕ್ಕಟ್ಟಿಗೆ ಸಿಲುಕುತ್ತಿದೆ.

ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್‌ನ ಮೂವರು ಶಾಸಕರು ಕೆಲವೇ ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಭಾರಿ ನಗದಿನೊಂದಿಗೆ ಸಿಕ್ಕಿಬಿದ್ದರು. ಜಾರ್ಖಂಡ್‌ನಿಂದ ಅವರು ಅಸ್ಸಾಂನತ್ತ ಹೊರಟಿದ್ದರು. ಅವರು ಸಂಚರಿಸುತ್ತಿದ್ದ ಎಸ್‌ಯುವಿಯಲ್ಲಿ ಅಪಾರ ಪ್ರಮಾಣದ ನಗದು ಇದೆ ಎಂಬ ಸುಳಿವಿನ ಆಧಾರದಲ್ಲಿ, ಶೋಧ ಕಾರ್ಯ ನಡೆಸಿದಾಗ ಅವರು ಸಿಕ್ಕಿಬಿದ್ದರು ಎನ್ನುತ್ತವೆ ಪೊಲೀಸ್ ದಾಖಲೆಗಳು.

ಈ ಮೂವರು ಶಾಸಕರು ಭಾರಿ ನಗದಿನೊಂದಿಗೆ ಸಿಕ್ಕಿ ಬಿದ್ದಾಗ, ಅದು ಜಾರ್ಖಂಡ್‌ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಆ ಮೂವರು ಭ್ರಷ್ಟರು ಎಂದು ವಿರೋಧ ಪಕ್ಷಗಳು ಬಿಂಬಿಸಿದವು. ಆದರೆ, ಕೆಲವೇ ದಿನಗಳಲ್ಲಿ ಈ ಪ್ರಕರಣ ಬೇರೆ ತಿರುವು ಪಡೆದುಕೊಂಡಿತು. ‘ಜಾರ್ಖಂಡ್‌ ಸರ್ಕಾರವನ್ನು ಬೀಳಿಸಲು ಬಿಜೆಪಿ ಯತ್ನಿಸುತ್ತಿದೆ. ಅದರ ಭಾಗವಾಗಿ ಈ ಮೂವರು ಶಾಸಕರಿಗೆ ಹಣ ನೀಡಿ ಅಸ್ಸಾಂಗೆ ಬರಲು ಹೇಳಲಾಗಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಅವರನ್ನು ಭೇಟಿ ಮಾಡಲು ಅವರು ಹೋಗುತ್ತಿದ್ದಾಗ, ಅವರನ್ನು ಬಂಧಿಸಲಾಗಿದೆ. ಪಕ್ಷದ ಇತರ ಶಾಸಕರನ್ನು ಸೆಳೆಯಲು ತಲಾ ₹10 ಕೋಟಿಯ ಆಮಿಷ ಒಡ್ಡಲಾಗಿದೆ’ ಎಂದು ರಾಜ್ಯ ಕಾಂಗ್ರೆಸ್‌, ಪೊಲೀಸರಲ್ಲಿ ದೂರು ದಾಖಲಿಸಿತು. ಈ ಪ್ರಕರಣದ ತನಿಖೆ ಪ್ರಗತಿಯಲ್ಲಿ ಇದೆ.

ಸರ್ಕಾರವನ್ನು ಉರುಳಿಸಲು ಬಿಜೆಪಿ ಎಲ್ಲಾ ಸ್ವರೂಪದ ಯತ್ನಗಳನ್ನೂ ಮಾಡುತ್ತಿದೆ ಎಂದು ಜಾರ್ಖಂಡ್‌ನ ಆಡಳಿತಾರೂಢ ಪಕ್ಷಗಳು ಆರೋಪಿಸಿವೆ. ಆಡಳಿತ ಪಕ್ಷಗಳ ಶಾಸಕರನ್ನು ಬೇರೆ ಬೇರೆ ಪ್ರಕರಣಗಳಲ್ಲಿ ಸಿಲುಕಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಜೆಎಂಎಂ ಮತ್ತು ಕಾಂಗ್ರೆಸ್ ಆರೋಪಿಸಿದ್ದವು. ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ನಡೆಸುತ್ತಿರುವ ತನಿಖೆಯನ್ನು ಈ ಆರೋಪಕ್ಕೆ ತಳಕು ಹಾಕಲಾಗಿದೆ.

ಹೇಮಂತ್‌ ಅನರ್ಹತೆಗೆ ಆಯೋಗ ಶಿಫಾರಸು?

ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ನಿಯಮಗಳನ್ನು ಉಲ್ಲಂಘಿಸಿದ್ದರಿಂದಾಗಿ ಅವರನ್ನು ಅನರ್ಹಗೊಳಿಸಬೇಕು ಎಂದು ಚುನಾವಣಾ ಆಯೋಗವು ರಾಜ್ಯಪಾಲರಿಗೆ ವರದಿ ಕೊಟ್ಟಿದೆ ಎಂದು ಹೇಳಲಾಗಿದೆ. ಆದರೆ ರಾಜ್ಯಪಾಲ ರಮೇಶ್‌ ಬೈಸ್‌ ಅವರ ಕಚೇರಿಯು ಇದನ್ನು ದೃಢಪಡಿಸಿಲ್ಲ.

ದೆಹಲಿಯಲ್ಲಿದ್ದ ರಾಜ್ಯಪಾಲ ಬೈಸ್‌ ಅವರು ಗುರುವಾರ ಅಪರಾಹ್ನ ರಾಂಚಿಗೆ ಬಂದರು. ವರದಿಯನ್ನು ಪರಿಶೀಲಿಸಿದ ಬಳಿಕವೇ ಪ್ರತಿಕ್ರಿಯೆ ನೀಡುವುದು ಸಾಧ್ಯ ಎಂದು ಅವರು ಹೇಳಿದರು.

ತಮ್ಮದೇ ಹೆಸರಿನಲ್ಲಿದ್ದ ಗಣಿಗಾರಿಕೆ ಗುತ್ತಿಗೆಯನ್ನು ವಿಸ್ತರಣೆ ಮಾಡಿಕೊಂಡಿದ್ದಾರೆ ಎಂಬುದು ಹೇಮಂತ್‌ ಅವರ ಮೇಲಿರುವ ಆರೋಪ. ಜನಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್‌ 9ಎ ಅಡಿಯಲ್ಲಿ, ಹೇಮಂತ್‌ ವಿರುದ್ಧ ಬಿಜೆಪಿ ದೂರು ನೀಡಿತ್ತು. ಸರ್ಕಾರಿ ಗುತ್ತಿಗೆಗಳಿಗೆ ಸಂಬಂಧಿಸಿ ಅನರ್ಹತೆಯ ವಿಚಾರವು 9ಎ ಸೆಕ್ಷನ್‌ನಲ್ಲಿದೆ.

ಶಾಸಕರ ಅನರ್ಹತೆಗೆ ಸಂಬಂಧಿಸಿದ ವಿಚಾರಗಳನ್ನು ರಾಜ್ಯಪಾಲರು ನಿರ್ವಹಿಸಬೇಕು. ಅವರು ಚುನಾವಣಾ ಆಯೋಗದ ಅಭಿಪ್ರಾಯ ಪಡೆದು, ಆ ಅಭಿಪ್ರಾಯಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಸಂವಿಧಾನದ 192ನೇ ವಿಧಿಯು ಹೇಳುತ್ತದೆ.

ಸಾಂವಿಧಾನಿಕ ಹುದ್ದೆಯಲ್ಲಿರುವವರು ಮತ್ತು ಸರ್ಕಾರಿ ಸಂಸ್ಥೆಗಳನ್ನು ನಿರ್ಲಜ್ಜವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಮಂತ್‌ ಹೇಳಿದ್ದಾರೆ.

ರಾಜ್ಯಪಾಲರಿಗೆ ವರದಿ ಸಲ್ಲಿಸುವುದಕ್ಕೂ ಮುನ್ನ ಆಯೋಗವು ವಿಚಾರಣೆ ನಡೆಸಿತ್ತು. ಹೇಮಂತ್‌ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಜನಪ್ರಾತಿನಿಧ್ಯ ಕಾಯ್ದೆಯ 9ಎ ಸೆಕ್ಷನ್‌ ಅನ್ವಯ ಆಗುವುದಿಲ್ಲ ಎಂದು ಹೇಮಂತ್‌ ಪರ ವಕೀಲರು ವಾದಿಸಿದ್ದರು.

ಮೈತ್ರಿ ಒಗ್ಗಟ್ಟು ಮುರಿಯುವತ್ತ...

ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಎನ್‌ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಬಿಜೆಪಿ ಆಯ್ಕೆ ಮಾಡಿದಾಗ, ಅದನ್ನು ವಿರೋಧ ಪಕ್ಷಗಳ ಒಗ್ಗಟ್ಟನ್ನು ಮುರಿಯುವ ಯತ್ನ ಎಂದು ವಿಶ್ಲೇಷಿಸಲಾಗಿತ್ತು. ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟು ಮುರಿಯಿತು.

ದ್ರೌಪದಿ ಮುರ್ಮು ಅವರು ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರು. ಮೂಲತಃ ಬಿಜೆಪಿಯ ನಾಯಕಿಯಾಗಿದ್ದರೂ, ಅವರ ಅಧಿಕಾರದ ಅವಧಿಯಲ್ಲಿ ರಾಜ್ಯ ಸರ್ಕಾರ ಮತ್ತು ಜೆಎಂಎಂ ಜತೆಗೆ ಅವರು ಉತ್ತಮ ಸಂಬಂಧ ಕಾಯ್ದುಕೊಂಡಿದ್ದರು. ಜಾರ್ಖಂಡ್‌, ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸಗಡದಲ್ಲಿ ಪ್ರಧಾನವಾಗಿರುವ ಸಂತಾಲ ಬುಡಕಟ್ಟಿಗೆ ಸೇರಿರುವ ದ್ರೌಪದಿ ಅವರನ್ನು ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಿತು. ಈ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ–ಎನ್‌ಡಿಎಯೇತರ ಪಕ್ಷಗಳ ಸರ್ಕಾರಗಳಿವೆ. ಆದರೆ ಈ ಪಕ್ಷಗಳು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲೇಬೇಕಾದಂತಹ ಅನಿವಾರ್ಯಕ್ಕೆ ಸಿಲುಕಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು.

ಜಾರ್ಖಂಡ್‌ ಆಡಳಿತ ಮೈತ್ರಿಕೂಟದ ಅತ್ಯಂತ ದೊಡ್ಡ ಪಕ್ಷವಾಗಿರುವ ಜೆಎಂಎಂ, ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಅವರನ್ನು ಬೆಂಬಲಿಸಿತು. ಮೈತ್ರಿಕೂಟದ ಪಕ್ಷವಾದ ಕಾಂಗ್ರೆಸ್‌ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಒಂದು ಹಂತದಲ್ಲಿ ಆಡಳಿತ ಮೈತ್ರಿಕೂಟದ ಒಗ್ಗಟ್ಟು ಮುರಿಯುವ ಹಂತಕ್ಕೂ ವಾಗ್ವಾದ ನಡೆದಿತ್ತು. ಆದರೆ ಆ ಬಿಕ್ಕಟ್ಟನ್ನು ಮಿತ್ರಪಕ್ಷಗಳು ಬಗೆಹರಿಸಿಕೊಂಡವು. ‌ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೆಲವು ಶಾಸಕರು ಅಡ್ಡ ಮತದಾನ ಮಾಡಿದ್ದು ಕಾಂಗ್ರೆಸ್‌ನ ಕಳವಳವನ್ನು ಹೆಚ್ಚಿಸಿದ್ದೂ ಹೌದು.

ಗಣಿಗಾರಿಕೆ ಪ್ರಕರಣದಲ್ಲಿ ಇ.ಡಿ ಜಾಡು

ಇ.ಡಿ ಶೋಧ ನಡೆಸಿದಾಗ ಸಿಕ್ಕ ಎರಡು ಎ.ಕೆ. 47 ಬಂದೂಕುಗಳು
ಇ.ಡಿ ಶೋಧ ನಡೆಸಿದಾಗ ಸಿಕ್ಕ ಎರಡು ಎ.ಕೆ. 47 ಬಂದೂಕುಗಳು

ಜಾರ್ಖಂಡ್‌ನಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಅಕ್ರಮ ಗಣಿಗಾರಿಕೆ ಹಗರಣ ಸದ್ದು ಮಾಡುತ್ತಿದೆ. ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಅವರ ಆಪ್ತರು ಈಗಾಗಲೇ ತನಿಖೆಯ ಬಿಸಿ ಎದುರಿಸಿದ್ದು, ಇದೀಗ ಹೇಮಂತ್‌ ಕಾಲುಬುಡಕ್ಕೆ ಪ್ರಕರಣ ಬಂದುನಿಂತಿದೆ. ಪ್ರಕರಣವು ಅವರಿಗೆ ಉರುಳಾಗುವ ಸಾಧ್ಯತೆಗಳಿವೆ. ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ಆರಂಭಿಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು (ಇ.ಡಿ.) ಇದೇ ಮೇ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 60 ಸ್ಥಳಗಳಲ್ಲಿ ಶೋಧ ನಡೆಸಿದ್ದರು. ಹತ್ತಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ, ಹಣ, ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಮಟ್ಟುಗೋಲು ಹಾಕಿಕೊಂಡಿದ್ದಾರೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳುಗುರುವಾರವಷ್ಟೇ (ಆ.25), ಪ್ರೇಮ್‌ ಪ್ರಕಾಶ್ ಎಂಬ ಮಧ್ಯವರ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನ, ಹೇಮಂತ್‌ ಅವರ ಆಪ್ತ ಪಂಕಜ್ ಮಿಶ್ರಾ ಮತ್ತು ಆತನ ಸಹಾಯಕ ಬಚ್ಚು ಯಾದವ್ ಎಂಬುವರನ್ನು ಜುಲೈನಲ್ಲಿ ಇ.ಡಿ ಬಂಧಿಸಿತ್ತು. ದೆಹಲಿ, ಬಿಹಾರ, ತಮಿಳುನಾಡು, ಜಾರ್ಖಂಡ್ ರಾಜ್ಯಗಳಲ್ಲಿ ಪ್ರಕಾಶ್ ಅವರಿಗೆ ಸೇರಿದ 18 ಸ್ಥಳಗಳ ಮೇಲೆ ಬುಧವಾರವಷ್ಟೇ ಇ.ಡಿ ದಾಳಿ ನಡೆಸಿತ್ತು. 2 ಎ.ಕೆ. 47 ಬಂದೂಕು, 60 ಗುಂಡುಗಳನ್ನು ಜಪ್ತಿ ಮಾಡಲಾಗಿತ್ತು.ಈ ಶಸ್ತ್ರಾಸ್ತ್ರ ಜಾರ್ಖಂಡ್‌ನ ಇಬ್ಬರು ಪೊಲೀಸ್ಕಾನ್‌ಸ್ಟೆಬಲ್‌ಗಳಿಗೆ ಸೇರಿದ್ದು, ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಪಂಕಜ್ ಮಿಶ್ರಾ ಅವರ ವಿಚಾರಣೆಯಿಂದ ಸಿಕ್ಕ ಸುಳಿವು ಆಧರಿಸಿ, ಈ ಶೋಧ ನಡೆಸಲಾಗಿತ್ತು.

ಜಾರ್ಖಂಡ್‌ನ ಸಾಹಿಬ್‌ಗಂಜ್‌ನ ಬರಹರವಾ ಪೊಲೀಸ್ ಠಾಣೆಯಲ್ಲಿ ಪಂಕಜ್ ಮಿಶ್ರಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಇ.ಡಿ. ತನಿಖೆ ಆರಂಭಿಸಿತ್ತು. ನಂತರ ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಹಲವು ದೂರುಗಳು ದಾಖಲಾದವು. ಇವೆಲ್ಲವನ್ನೂ ಇ.ಡಿ. ತನಿಖೆಗೆ ಒಳಪಡಿಸಿತು. ಪ್ರಕರಣದಲ್ಲಿ ₹100 ಕೋಟಿಗೂ ಹೆಚ್ಚು ಮೌಲ್ಯದ ಹಣ ಹಾಗೂ ಆಸ್ತಿಗಳನ್ನು ಪತ್ತೆ ಮಾಡಲಾಗಿದೆ ಎಂದು ಇ.ಡಿ. ಹೇಳಿದೆ.

ಬೇರೆ ತನಿಖೆಯ ವೇಳೆ ಸಿಕ್ಕಿತು ಗಣಿಗಾರಿಕೆ ಸುಳಿವು!: 2008–10ರಲ್ಲಿ ಜಾರ್ಖಂಡ್‌ನ ಕುಂಟಿಯಲ್ಲಿ ನಡೆದಿದೆ ಎನ್ನಲಾದ ನರೇಗಾ ಹಗರಣದ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯಕ್ಕೆ ಅಕ್ರಮ ಗಣಿಗಾರಿಕೆ ಹಾಗೂ ಹಣ ಅಕ್ರಮ ವರ್ಗಾವಣೆ ಸುಳಿವು ಸಿಕ್ಕಿತು. ಗಣಿ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪೂಜಾ ಸಿಂಘಾಲ್ ಹಾಗೂ ಅವರ ಪತಿ, ಉದ್ಯಮಿ ಅಭಿಷೇಕ್ ಝಾ, ಝಾ ಅವರ ಚಾರ್ಟರ್ಡ್ ಅಕೌಂಟೆಂಟ್ ಸುಮನ್ ಕುಮಾರ್ ಅವರಿಗೆ ಸೇರಿದ 36 ಸ್ಥಳಗಳಲ್ಲಿ ಮೇ 6ರಂದು ಇ.ಡಿ. ಶೋಧ ನಡೆಸಿತು.

ಕುಮಾರ್ ಮನೆಯಿಂದ ₹17.76 ಕೋಟಿ ಮೌಲ್ಯದ ಆಸ್ತಿ ದಾಖಲೆಗಳನ್ನು ಇ.ಡಿ. ಮುಟ್ಟುಗೋಲು ಹಾಕಿಕೊಂಡಿತು. ಮೇ 7ರಂದು ಅವರನ್ನು ಬಂಧಿಸಿತು. ಮೇ 11ರಂದು ಪೂಜಾ ಸಿಂಘಾಲ್ ಸಹ ಬಂಧನಕ್ಕೆ ಒಳಗಾದರು. ಸಿಂಘಾಲ್ ಹಾಗೂ ಝಾ ಅವರ ವಿಚಾರಣೆ ವೇಳೆ, ಅಕ್ರಮ ಗಣಿಗಾರಿಕೆ ಹಾಗೂ ಹಣ ಅಕ್ರಮ ವರ್ಗಾವಣೆ ನಡೆದಿರುವ ಸುಳಿವು ಅಧಿಕಾರಿಗಳಿಗೆ ಸಿಕ್ಕಿತ್ತು. ಹೀಗಾಗಿ ತನಿಖೆಯ ವ್ಯಾಪ್ತಿಯನ್ನು ಇ.ಡಿ. ವಿಸ್ತರಿಸಿತು. ತಕ್ಷಣವೇ, ಬರಹೇಟ್ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹೇಮಂತ್‌ ಅವರ ರಾಜಕೀಯ ಪ್ರತಿನಿಧಿಯಾಗಿದ್ದ ಪಂಕಜ್ ಮಿಶ್ರಾ ಹಾಗೂ ಆತನ ಸಹಾಯಕ ಬಚ್ಚು ಯಾದವ್‌ಗೆ ಸಮನ್ಸ್ ನೀಡಿ, ಇಬ್ಬರನ್ನೂ ಬಂಧಿಸಿತು.

ಜನರ ಬೆಂಬಲವೇ ನನ್ನ ಬಲ. ನೀವು ತನಿಖಾ ಸಂಸ್ಥೆಗಳನ್ನು ಖರೀದಿಸಬಹುದು. ಆದರೆ ಈ ರೀತಿಯ ಜನ ಬೆಂಬಲವನ್ನು ಖರೀದಿಸಲು ಸಾಧ್ಯವೇ?

~ಹೇಮಂತ್ ಸೊರೇನ್‌, ಜಾರ್ಖಂಡ್‌ ಮುಖ್ಯಮಂತ್ರಿ

ನೈತಿಕತೆ ಇದ್ದರೆ ಹೇಮಂತ್ ಸೊರೇನ್‌ ರಾಜೀನಾಮೆ ನೀಡಬೇಕು. ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಬೇಕು. ಎಲ್ಲಾ 81 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಬೇಕು

– ನಿಶಿಕಾಂತ್ ದುಬೆ, ಬಿಜೆಪಿ ಸಂಸದ

ಶಾಸಕರ ಅನರ್ಹತೆ ವಿಚಾರವನ್ನು ಇತ್ಯರ್ಥಪಡಿಸಲು ಸಂವಿಧಾನಬದ್ಧವಾದ ನ್ಯಾಯಾಲಯವು ಸರಿಯಾದ ಸ್ಥಳವೇ ಹೊರತು, ಬಿಜೆಪಿ ನೇಮಕ ಮಾಡಿದ ರಾಜ್ಯಪಾಲರಲ್ಲ

– ಜೆ.ಪಿ.ಮಜುಂದಾರ್, ಟಿಎಂಸಿ ವಕ್ತಾರ

ಆಧಾರ: ಪಿಟಿಐ, ರಾಯಿಟರ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT