ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್‌ಗಾಗಿ ಲಾಬಿ ಜೋರು: ಆಯ್ಕೆ ಲೆಕ್ಕಾಚಾರ

ವಿಧಾನಸಭೆ ಚುನಾವಣೆ: ಐದು ಕ್ಷೇತ್ರಗಳಲ್ಲಿ 50ಕ್ಕೂ ಹೆಚ್ಚು ಆಕಾಂಕ್ಷಿಗಳು
Last Updated 3 ಏಪ್ರಿಲ್ 2018, 10:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜನತಂತ್ರದ ಹಬ್ಬಕ್ಕೆ ಮುಹೂರ್ತ ನಿಗದಿಯಾದ ಬೆನ್ನಲ್ಲೇ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಲಾಬಿ ಜೋರಾಗಿದೆ. ಜಾತ್ಯತೀತ ಜನತಾದಳ (ಜೆಡಿಎಸ್‌) ಪಕ್ಷವು ಜಿಲ್ಲೆಯ ಐದೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದ್ದು, ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಲೆಕ್ಕಾಚಾರ ಬಿರುಸುಗೊಂಡಿದೆ. ಆಕಾಂಕ್ಷಿಗಳು ಕೊನೆ ಹಂತದ ಕಸರತ್ತಿನಲ್ಲಿ ತೊಡಗಿದ್ದಾರೆ.ಮಲೆನಾಡು, ಬಯಲುಸೀಮೆಯ ಬೀಡು, ಕಾಫಿನಾಡು ಹಣೆಪಟ್ಟಿಯ ಈ ಜಿಲ್ಲೆಯಲ್ಲಿ ಚುನಾವಣೆಗೆ ತಾಲೀಮು ಚುರುಕುಗೊಂಡಿದೆ. ಅಭ್ಯರ್ಥಿ ಆಯ್ಕೆ ನಿಟ್ಟಿನಲ್ಲಿ ಜಾತಿ, ಹಣ, ಜನಬಲ, ಪಕ್ಷ ನಿಷ್ಠೆ, ಲೆಕ್ಕಾಚಾರ ನಡೆಯುತ್ತಿದೆ. ಟಿಕೆಟ್‌ ದೊರೆಯುವ ವಿಶ್ವಾಸ ಇರುವವರು ತಯಾರಿ ಆರಂಭಿಸಿದ್ದಾರೆ. ಪ್ರಚಾರ ಭರಾಟೆಯ ಕಾವು ಏರುತ್ತಿದೆ.

ಜೆಡಿಎಸ್‌ ಚಿಕ್ಕಮಗಳೂರು ಕ್ಷೇತ್ರ ದಲ್ಲಿ ಬಿ.ಎಚ್‌.ಹರೀಶ್‌, ಶೃಂಗೇರಿ ಯಲ್ಲಿ ಎಚ್‌.ಜಿ.ವೆಂಕಟೇಶ್‌ (ಎಚ್‌.ಜಿ.ಗೋವಿಂದೇಗೌಡ ಪುತ್ರ), ತರೀಕೆರೆ ಯಲ್ಲಿ ಟಿ.ಎಚ್‌.ಶಿವಶಂಕರಪ್ಪ, ಕಡೂರು ಹಾಗೂ ಮೂಡಿಗೆರೆ ಕ್ಷೇತ್ರಗಳಲ್ಲಿ ಹಾಲಿ ಶಾಸಕರಾದ ವೈಎಸ್‌ವಿ ದತ್ತ ಹಾಗೂ ಬಿ.ಬಿ.ನಿಂಗಯ್ಯ ಹೆಸರನ್ನು ಪ್ರಕಟಿಸಿದೆ. ಕ್ರಮವಾಗಿ ಲಿಂಗಾಯತ, ಒಕ್ಕಲಿಗ, ಕುರುಬ, ಬ್ರಾಹ್ಮಣ, ದಲಿತ ಸಮುದಾಯದವರಿಗೆ ಮಣೆ ಹಾಕಿದೆ.ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಅಭ್ಯರ್ಥಿಗಳ ಆಯ್ಕೆ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸಮೀಕ್ಷೆ, ಜನರು ಮತ್ತು ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿವೆ.

ಗೆಲ್ಲುವ ಸಾಮರ್ಥ್ಯ ಇರುವವರನ್ನು ಕಣಕ್ಕಿಳಿಸಲಾಗುವುದು, ಟಿಕೆಟ್‌ ಕೈತಪ್ಪಿದ ಕಾರಣಕ್ಕೆ ಯಾರಾದರೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಈಚೆಗೆ ನಗರಕ್ಕೆ ಬಂದಿದ್ದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಪಕ್ಷದವರಿಗೆ ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ವರಿಷ್ಠರ ದುಂಬಾಲು ಬಿದ್ದಿದ್ದಾರೆ. ಪಟ್ಟಿ ಪ್ರಕಟಣೆಯನ್ನು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಅಭ್ಯರ್ಥಿ ಘೋಷಣೆಯಾಗಿಲ್ಲದಿದ್ದರೂ ಕೆಲವರು ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ. ಟಿಕೆಟ್‌ ಕೈತಪ್ಪಿದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಇರಾದೆ ಹೊಂದಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಬಿಜೆಪಿ, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು

ಚಿಕ್ಕಮಗಳೂರು: ಬಿಜೆಪಿ–ಹಾಲಿಕ ಶಾಸಕ ಸಿ.ಟಿ.ರವಿ ಮತ್ತೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್‌ನಿಂದ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌.ಶಂಕರ್‌, ಪ್ರಧಾನ ಕಾರ್ಯದರ್ಶಿಗಳಾದ .ವಿ.ಗಾಯತ್ರಿಶಾಂತೇಗೌಡ, ಎಂ.ಎಲ್‌.ಮೂರ್ತಿ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ಡಿ.ಎಲ್‌.ವಿಜಯಕುಮಾರ್‌, ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮದ ಅಧ್ಯಕ್ಷ ಎ.ಎನ್‌.ಮಹೇಶ್‌, ಎಐಸಿಸಿ ಸದಸ್ಯ ಬಿ.ಎಂ.ಸಂದೀಪ್‌, ಕೆಪಿಸಿಸಿ ಕಿಸಾನ್‌ ಘಟಕದ ರಾಜ್ಯ ಸಂಚಾಲಕ ಸಿ.ಎನ್‌.ಅಕ್ಮಲ್‌, ಸವಿತಾ ರಮೇಶ್‌ ಮುಂಚೂಣಿಯಲ್ಲಿ ಇದ್ದಾರೆ.

ಮೂಡಿಗೆರೆ(ಮೀಸಲು ಕ್ಷೇತ್ರ): ಬಿಜೆಪಿ– ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಸಂಸದರ ಆದರ್ಶ ಗ್ರಾಮ ಸಲಹಾಮಂಡಳಿ ಸದಸ್ಯ ದೀಪಕ್‌ ದೊಡ್ಡಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ರಾದ ಬಿ.ಶಿವಶಂಕರ್‌ (ಶೃಂಗೇರಿ ಶಿವಣ್ಣ), ಬಿ.ಎಸ್‌.ಚೈತ್ರಶ್ರೀ, ಬಣಕಲ್‌ ಶಾಮಣ್ಣ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌– ವಿಧಾನ ಪರಿಷತ್‌ ಸದಸ್ಯೆ ಮೋಟಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೂವಪ್ಪ, ನಾಗರತ್ನ, ನಯನಾ ಜ್ಯೋತಿ ಜಾವರ್ (ಮೋಟಮ್ಮ ಪುತ್ರಿ) ಆಕಾಂಕ್ಷಿಗಳಾಗಿದ್ದಾರೆ.

ಶೃಂಗೇರಿ: ಬಿಜೆಪಿ– ಹಾಲಿ ಶಾಸಕ ಡಿ.ಎನ್‌.ಜೀವರಾಜ್‌ ಮತ್ತೊಮ್ಮೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಎ.ಎಸ್‌.ನಯನಾ ಜ್ಯೋತಿ ಜಾಗ್ವಾರ್ ಆಕಾಂಕ್ಷಿ ಯಾಗಿದ್ದಾರೆ.ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಡಿ.ರಾಜೇಗೌಡ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿಕೃಷ್ಣ, ಕೆಪಿಸಿಸಿ ಕಿಸಾನ್‌ ಘಟಕದ ಅಧ್ಯಕ್ಷ ಸಚಿನ್‌ ಮೀಗಾ, ಮಾಜಿ ಸಚಿವೆ ತಾರಾದೇವಿಸಿದ್ಧಾರ್ಥ, ಡಾ.ಅಂಶುಮಂತ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ತರೀಕೆರೆ: ಬಿಜೆಪಿ– ಮಾಜಿ ಶಾಸಕ ಡಿ.ಎಸ್‌.ಸುರೇಶ್‌, ಎಚ್‌.ಎಂ.ಗೋಪಿಕೃಷ್ಣ, ಎಚ್.ಎಂ.ಓಂಕಾರಪ್ಪ, ಆರ್‌.ದೇವಾನಂದ್‌ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌– ಹಾಲಿ ಶಾಸಕ ಜಿ.ಎಚ್‌.ಶ್ರೀನಿವಾಸ್‌ ಮತ್ತೊಮ್ಮೆ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಟಿ.ವಿ.ಶಿವಶಂಕರಪ್ಪ, ದೋರನಾಳು ಪರ ಮೇಶ್‌, ಎಸ್‌.ಲೋಕೇಶ್ವರಪ್ಪ, ಟಿ.ಎನ್‌.ಗೋಪಿನಾಥ್‌, ಕೆ.ಆರ್.ಧ್ರುವಕುಮಾರ್‌ ಆಕಾಂಕ್ಷಿ ಗಳ ಪಟ್ಟಿಯಲ್ಲಿದ್ದಾರೆ.

ಕಡೂರು: ಬಿಜೆಪಿ– ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬೆಳ್ಳಿ ಪ್ರಕಾಶ್‌, ರೇಖಾ ಹುಲಿಯಪ್ಪಗೌಡ, ಮಾಜಿ ಶಾಸಕ ಡಾ.ವೈ.ಸಿ.ವಿಶ್ವನಾಥ್‌, ಎಂ.ಪಿ.ನಾರಾಯಣ ಸ್ವಾಮಿ, ಎಚ್‌.ಎಚ್‌.ದೇವರಾಜ್‌, ಜಿ.ಕೆ.ಗಿರೀಶ್‌ ಉಪ್ಪಾರ, ಕೆ.ಬಿ.ಸೋಮೇಶ್‌ ಆಕಾಂಕ್ಷಿಗಳಾಗಿದ್ದಾರೆ.ಕಾಂಗ್ರೆಸ್‌– ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಆರ್‌.ಮಹೇಶ್‌ ಒಡೆಯರ್‌, ಶರತ್‌ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು, ಕೆ.ಎಸ್.ಆನಂದ್‌, ಕೆ.ಎಂ.ವಿನಾಯಕ, ಸಿ.ಎಂ.ಧನಂಜಯ, ಸಿ.ನಂಜಪ್ಪ, ಡಾ.ನಿರಂತರ ಗಣೇಶ್‌ , ಚಂದ್ರಪ್ಪ, ವನಮಾಲಾ ದೇವರಾಜ್‌, ಕೆ.ಎಚ್‌.ರಂಗನಾಥ್‌ ಆಕಾಂಕ್ಷಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT