ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಣೆ ಮೈಸೂರ್ ಪಾಕ್, ಜಾಮೂನು

Last Updated 16 ಜೂನ್ 2018, 10:16 IST
ಅಕ್ಷರ ಗಾತ್ರ

ನವಣೆ, ಸಾಮೆ, ಹಾರಕ, ಕೊರ್ಲು... ಹೀಗೆ ವಿವಿಧ ಸಿರಿಧಾನ್ಯಗಳಿಂದ ಮಾಡಿದ ಪಾಯಸ, ಬಿಸಿಬೇಳೆಬಾತ್, ನವಣೆ ಫ್ರೈಡ್‌ ರೈಸ್, ನವಣೆ ಪೊಂಗಲ್, ರೊಟ್ಟಿ ಇನ್ನಿತರೆ ಖಾದ್ಯಗಳನ್ನು ಗ್ರಾಹಕರಿಗೆ ಪರಿಚಯಿಸಿ ಹೆಸರುವಾಸಿಯಾಗಿದ್ದ ಹೋಟೆಲ್‌ನಲ್ಲಿ ಈಗ ಸಿರಿಧಾನ್ಯಗಳ ಸಿಹಿ ತಿನಿಸುಗಳ ದರ್ಬಾರು.

ಇಸ್ಕಾನ್ ದೇಗುಲದ ಪಕ್ಕದಲ್ಲಿರುವ ‘ವಂದೇ ಮಾತರಂ’ ಹೋಟೆಲ್, ಆರು ವರ್ಷಗಳಿಂದ ಸಿರಿಧಾನ್ಯಗಳ ವಿವಿಧ ಬಗೆಯ ಖಾದ್ಯಗಳನ್ನು ಗ್ರಾಹಕರಿಗೆ ಉಣಬಡಿಸುತ್ತಾ ಬಂದಿದೆ. ಗ್ರಾಹಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಈ ಜನಪ್ರಿಯತೆ ಇನ್ನಷ್ಟು ಹೆಚ್ಚುವಂತೆ ಮಾಡಲು ಹೊಸ ಪ್ರಯೋಗವನ್ನು ಮಾಡಿದ್ದಾರೆ. ಸಿಹಿಪ್ರಿಯರಿಗಾಗಿ ಸಿರಿಧಾನ್ಯಗಳಲ್ಲಿಯೇ ಸಿಹಿತಿನಿಸುಗಳನ್ನೂ ತಯಾರಿಸಿದ್ದಾರೆ.

ಈ ಪ್ರಯತ್ನದ ಹಿಂದೆ ಸಾಕಷ್ಟು ದಿನಗಳ ಸಂಶೋಧನೆ ಹಾಗೂ ಪರಿಶ್ರಮ ಅಡಗಿದೆ ಎಂಬುದು ಮಾಲೀಕ ಕೆ.ಆರ್‌. ನಾಗೇಶ್ ಮಾತುಗಳಿಂದ ಅರ್ಥವಾಗುತ್ತಿತ್ತು. ಮಾತುಗಳು ಸಾಗುತ್ತಿದ್ದವು. ಜನರಲ್ಲಿ ಸಿರಿಧಾನ್ಯದ ಟ್ರೆಂಡ್‌ ಸೃಷ್ಟಿಯಾದ ಬಗ್ಗೆ, ಈ ಹೋಟೆಲ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ಇತ್ಯಾದಿ... ಈ ಮಾತಿಗೆಲ್ಲ, ಅಲ್ಪವಿರಾಮ ಹಾಕಿದ್ದು ಘಂ ಎನ್ನುವ ಮೈಸೂರು ಪಾಕಿನ ವಾಸನೆ.

ತಟ್ಟೆಯೊಳಗಿಟ್ಟ ಕಡುಕಂದು ಬಣ್ಣದ ಮೈಸೂರು ಪಾಕ್‌ ಹೆಚ್ಚೇನೂ ಸಾಮಾನ್ಯ ಪಾಕ್‌ಗಿಂತ ಭಿನ್ನವಾಗಿಯೇನೂ ಇರಲಿಲ್ಲ. ಆದರೆ ಬಾಯಿಗಿಟ್ಟಾಗಲೇ ಗೊತ್ತಾಗಿದ್ದು, ಅದರ ಗಮ್ಮತ್ತು ಬೇರೆ ಇದೆಯೆಂದು. ಇದಕ್ಕೆ ಕಡಲೆ ಹಿಟ್ಟಲ್ಲ, ನವಣೆಯನ್ನು ಬಳಸಲಾಗಿತ್ತು.

ರೆಸ್ಟೊರೆಂಟ್ ಹಾಗೂ ದರ್ಶಿನಿ ಮಾದರಿಯ ಈ ಹೋಟೆಲ್ ಒಂದೇ ಕಟ್ಟಡದಲ್ಲಿದ್ದು, ಅದರ ಪರಿಚಯಕ್ಕೆ ಮಾಲೀಕರು ಮುಂದಾದರು. ಕುಟುಂಬಸ್ಥರು ಹಾಗೂ ಸ್ನೇಹಿತರ ಜತೆ ಕೂತು ಆರಾಮದಾಯಕವಾಗಿ ವಿವಿಧ ಖಾದ್ಯಗಳನ್ನು ಸವಿಯಲು ಬರುವವರು ರೆಸ್ಟೋರೆಂಟ್ ಬಳಸಿಕೊಂಡರೆ, ಅವಸರದಲ್ಲಿರುವವರು ದರ್ಶಿನಿ ಮಾದರಿಯ ವಂದೇ ಮಾತರಂಗೆ ಹೋಗುತ್ತಾರೆ. ಎರಡರಲ್ಲೂ ಸಿಗುವುದು ಒಂದೇ ಬಗೆಯ ಆಹಾರ.

ಹೋಟೆಲ್‌ನ ಗೋಡೆಗಳ ಮೇಲೆ ಸಿರಿಧಾನ್ಯಗಳಿಂದ ತಯಾರಿಸಿದ ಅಲಂಕಾರ ಕಣ್ಮನ ಸೆಳೆಯಿತು. ಸಿರಿಧಾನ್ಯ ಖಾದ್ಯಗಳ ಬಗ್ಗೆ ಮಾಹಿತಿಯುಳ್ಳ ಫಲಕಗಳು ಟೇಬಲ್‌ ಮೇಲೆ ಕಾಣಸಿಗುತ್ತವೆ. ಅವುಗಳನ್ನು ನೋಡಿಯೇ ಹೆಚ್ಚು ಜನರು ಹೊಸ ರುಚಿ ಸವಿಯಲು ಮುಂದಾಗುತ್ತಾರೆ ಎನ್ನುತ್ತಲೇ ಹೋಟೆಲ್‌ನ ಬಗ್ಗೆ ಪರಿಚಯ ಮಾಡಿಕೊಟ್ಟರು ಕೆ.ಆರ್.ನಾಗೇಶ್.

ಇಡೀ ಹೋಟೆಲ್‌, ಒಮ್ಮೆ ಸುತ್ತಾಡಿ ಬರುವಾಗ ಆಗಲೇ ಮೈಸೂರು ಪಾಕ್‌ ಸವಿ ನಾಲಗೆಯಿಂದ ನೇಪಥ್ಯಕ್ಕೆ ಸರಿದಂತಾಗಿತ್ತು. ಬಾಯಲ್ಲಿ ನೀರೂರುವಂಥ ಕಡುಕಂದು ಬಣ್ಣದ ಗುಲಾಬ್‌ ಜಾಮೂನ್‌ ನಮಗಾಗಿ ಕಾಯುತ್ತಿತ್ತು. ಬಿಸಿಬಿಸಿ ಜಾಮೂನು, ಕಾದ ಎಣ್ಣೆಯಲ್ಲಿ ಮೈ ತೋಯಿಸಿಕೊಂಡು, ಹೊರಮೈ ಗರಿಗರಿಯಾಗಿಸಿಕೊಂಡು, ಒಳಗೆ ಮಾತ್ರ ಮೃದುಕೋಮಲವಾಗಿತ್ತು. ಸಕ್ಕರೆ ಪಾಕದಲ್ಲಿ ಮಿಂದೆದ್ದು ಬಂದ ಜಾಮೂನು ಮೇಲ್ನೋಟಕ್ಕೆ ಸಾಮಾನ್ಯ ಜಾಮೂನಿನಂತೆಯೇ ಕಾಣುತ್ತಿತ್ತು. ಬಾಯಿಗಿರಿಸಿಕೊಂಡಾಗ ಅದೇ ಮೃದುತ್ವ, ಅದೇ ಸಿಹಿ ಸವಿ. ನವಣೆಯೊಗರಿನೊಂದಿಗೆ ಈ ಸಿಹಿ ಜಾಮೂನು ಮನಸೂರೆಗೊಂಡಿತು.

ತಂದೂರಿ ರಾಗಿ ರೋಟಿ, ನವಣೆ ರೋಟಿ, ಸಜ್ಜೆ ರೊಟ್ಟಿಯೂ ನಮ್ಮಲ್ಲಿ ವಿಶೇಷ ಎಂದ ಸಿಬ್ಬಂದಿ ಅವುಗಳನ್ನು ಎದುರಿಗೆ ತಂದಿಟ್ಟರು. ಅವೂ ಸಹ ರುಚಿಕರವಾಗಿದ್ದವು. ಸಿರಿಧಾನ್ಯಗಳಿಂದಲೇ ಮಾಡಿದ 50 ಬಗೆಯ ಖಾದ್ಯಗಳಲ್ಲಿ ನವಣೆ ಬಿಸಿಬೇಳೆಬಾತ್‌, ನವಣೆ ಮೈಸೂರು ಪಾಕ್‌, ನವಣೆ ಪಾಯಸ, ಮಸಾಲಾ ಜೋಳದ ರೋಟಿ, ಸಜ್ಜೆ ರೋಟಿ, ನವಣೆ ರೋಟಿ, ಕೆಂಪು ಅಕ್ಕಿಯ ರೋಟಿ, ರಾಗಿ ಮಸಾಲಾ ರೋಟಿ, ಜೋಳದ ದೋಸೆ, ಸಜ್ಜೆ ದೋಸೆ, ನವಣೆ ದೋಸೆ, ರಾಗಿ ದೋಸೆ, ಜೋಳದ ಇಡ್ಲಿ, ಸಜ್ಜೆ ಇಡ್ಲಿ, ರಾಗಿ ಇಡ್ಲಿ, ನವಣೆ ಇಡ್ಲಿ, ಜೋಳದ ತಂದೂರಿ ರೋಟಿ, ನವಣೆ ತಂದೂರಿ ರೋಟಿ ಸೇರಿವೆ. ಉತ್ತರ ಭಾರತದ ಊಟವೂ ಲಭ್ಯ. ರುಚಿಗಾಗಿ ಹಾಕುವ ಪುಡಿಗಳಾಗಲೀ, ಬಣ್ಣಗಳನ್ನಾಗಲೀ ಬಳಸದೆ ಆಹಾರ ಸಿದ್ಧಪಡಿಸುವುದು ಈ ಹೋಟೆಲ್‌ನ ವಿಶೇಷತೆ. ಹೊಸ ಖಾದ್ಯಗಳಿಗೆ ಜೋತುಬಿದ್ದು ರುಚಿಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ಎಂದೂ ಹಿಂದೆ ಬಿದ್ದಿಲ್ಲ ಈ ಹೋಟೆಲ್

ನವಣೆಯಿಂದ ತಯಾರಿಸಿದ್ದೇವೆ ಎಂಬ ಕಾರಣಕ್ಕೆ ಮೈಸೂರು ಪಾಕ್ ಹಾಗೂ ಜಾಮೂನುಗೆ ಹೆಚ್ಚಿನ ದರ ವಿಧಿಸಿಲ್ಲ. ಮೈಸೂರ್ ಪಾಕ್‌ಗೆ ₹20 ಹಾಗೂ ಜಾಮೂನುಗೆ ₹15 ನಿಗದಿ ಮಾಡಿದ್ದೇವೆ. ಸಂಪೂರ್ಣವಾಗಿ ತುಪ್ಪದಿಂದ ಮೈಸೂರ್ ಪಾಕ್ ಮಾಡುವುದರಿಂದ ಅದರ ಬೆಲೆ ತುಸು ಜಾಸ್ತಿಯೇ ಇದೆ. ಇವುಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಹೊರಗಡೆಯಿಂದ ತಂದು ನಮಗೆ ಬೇಕಾದ ರೀತಿ ಸಿದ್ಧಪಡಿಸಿಕೊಳ್ಳುತ್ತೇವೆ. ಮೈಸೂರ್ ಪಾಕ್‌ಗೆ ಸಂಪೂರ್ಣವಾಗಿ ಶುದ್ಧ ಬೆಲ್ಲ ಬಳಸಿದರೆ, ಜಾಮೂನುಗೆ ಶೇ 20 ರಷ್ಟು ಬೆಲ್ಲ ಹಾಗೂ ಉಳಿದಂತೆ ಸಕ್ಕರೆ ಬಳಸಿ ತಯಾರಿಸುತ್ತೇವೆ. ಈ ಸಿಹಿ ತಿನಿಸುಗಳನ್ನು ಸವಿದು ಗ್ರಾಹಕರ ಮೊಗದಲ್ಲಿ ನಗು ಮೂಡಿದರಷ್ಟೇ ನಮಗೆ ಅಂತಿಮವಾಗಿ ಸಿಗುವ ನೆಮ್ಮದಿ ಎನ್ನುತ್ತಾರೆ ನಾಗೇಶ್.

ಇಲ್ಲಿ ತಯಾರಾಗುವ ಆಹಾರಕ್ಕೆ ಬಳಸುವ ತರಕಾರಿಗಳನ್ನು ಮೊದಲು ಹುಣಸೆಹಣ್ಣಿನ ರಸದಿಂದ ತೊಳೆಯಲಾಗುತ್ತದೆ ಎನ್ನುತ್ತಾರೆ ಅವರು. ಸಿರಿಧಾನ್ಯಗಳಿರುವುದರಿಂದ ಯಥೇಚ್ಛ ಪೌಷ್ಟಿಕಾಂಶಗಳ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಒಳಗೊಂಡಿರುತ್ತದೆ. ಇಷ್ಟೆಲ್ಲ ಗುಣಗಳನ್ನು ಹೊಂದಿರುವ ಸಿರಿಧಾನ್ಯಗಳ ಮಹತ್ವ ಸಾರುವ ಉದ್ದೇಶದಿಂದ ಈ ಹೋಟೆಲ್‌ನಲ್ಲಿ ಸಿರಿಧಾನ್ಯಗಳ ಖಾದ್ಯಗಳನ್ನು ಪರಿಚಯಿಸಲಾಗಿದೆ. ಹೋಟೆಲ್‌ನಲ್ಲಿ ಸಿರಿಧಾನ್ಯಗಳಿಂದ ಮಾಡಿದ ಆಹಾರ ಒದಗಿಸುವುದರ ಜೊತೆಗೆ ಅವುಗಳ ಮಹತ್ವ ತಿಳಿಸಿ ಕೊಡುತ್ತಿದ್ದಾರೆ ನಾಗೇಶ್.

‘ಇತರ ಆಹಾರಗಳಷ್ಟೇ ಇವುಗಳ ಬೆಲೆ ನಿಗದಿಪಡಿಸಲಾಗಿದೆ. ಹಾಗೆ ನೋಡಿದರೆ ಸಿರಿಧಾನ್ಯಗಳ ಬೆಲೆ ಹೆಚ್ಚು. ಲಾಭಕ್ಕಿಂತ ಗ್ರಾಹಕರಲ್ಲಿ ಬದಲಾವಣೆ ತರುವ ಉದ್ದೇಶ ನನ್ನದು. ಭವಿಷ್ಯದಲ್ಲಿ ಚೈನೀಸ್‌ ಆಹಾರದಲ್ಲೂ ಸಿರಿಧಾನ್ಯಗಳನ್ನು ಪರಿಚಯಿಸುವ ಇರಾದೆ ಇದೆ ಎನ್ನುತ್ತಾರೆ’ ನಾಗೇಶ್‌.

ದೇಶ ಪ್ರೇಮಕ್ಕಾಗಿ ‘ವಂದೇ ಮಾತರಂ’

ಫಾರ್ಮಸಿಯಲ್ಲಿ ಡಿಪ್ಲೊಮಾ ಮಾಡಿರುವ ಕೆ.ಆರ್.ನಾಗೇಶ್ ಈ ಹೋಟೆಲ್ ಪ್ರಾರಂಭಿಸಿದರು. ದೇಶಭಕ್ತರಾದ ಇವರು ‘ಖಾನಾ ಕಿ ಸಾಥ್ ದೇಶ್ ಕಿ ಬಾತ್’ (ಊಟದ ಜೊತೆಗೆ ದೇಶ ಪ್ರೇಮದ ಮಾತು) ಆಡಲಿ ಎಂಬ ಕಾರಣಕ್ಕೆ ಹೋಟೆಲ್‌ಗೆ ‘ವಂದೇ ಮಾತರಂ’ ಎಂದು ಹೆಸರಿಟ್ಟಿದ್ದಾರೆ.

ದೇಶಕ್ಕಾಗಿ ಎಷ್ಟೋ ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ದಿನದಂದೋ ಅಥವಾ ಗಣರಾಜ್ಯೋತ್ಸವದಂದೋ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪು ಮಾಡಿಕೊಂಡು ಸುಮ್ಮನಾಗುತ್ತೇವೆ. ಆದ್ದರಿಂದ ದಿನಕ್ಕೆ ಒಮ್ಮೆಯಾದರೂ ದೇಶವನ್ನು ನೆನಪು ಮಾಡಿಕೊಳ್ಳಲೆಂದು ಹೋಟೆಲ್‌ಗೆ ‘ವಂದೇ ಮಾತರಂ’ ಹೆಸರು ಇಡಲಾಯಿತು. ರೈತರು, ಕಾರು ಚಾಲಕರು ಸೇರಿದಂತೆ ಎಲ್ಲರೂ ತಮ್ಮ ಕಾಯಕಗಳನ್ನು ಮಾಡುತ್ತಲೇ ದೇಶ ಪ್ರೇಮ ಮೆರೆಯುತ್ತಿದ್ದಾರೆ. ಅದೇ ರೀತಿ ನಾನೂ ಸಹ ಆರೋಗ್ಯಕರವಾದ ಆಹಾರವನ್ನು ಗ್ರಾಹಕರಿಗೆ ಉಣಬಡಿಸಿ ದೇಶಸೇವೆ ಮೆರೆಯುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT