ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೀಚ್‌ ಥೆರಪಿ’ ಚಿಂತೆ ಕಳೆವ ಕಡಲ ಅಲೆ

Last Updated 6 ಜನವರಿ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ನಿಂದಾಗಿ ಹಲವು ತಿಂಗಳುಗಳ ಕಾಲ ಮನೆಯಲ್ಲೇ ಬಂಧಿಯಾಗಿದ್ದ ಸಿನಿ ತಾರಾ ಬಳಗ ಈಚೆಗೆ ಹೊರ ಬರುತ್ತಿದೆ. ಕೆಲವರು ಸೀದಾ ತಮ್ಮ ಹೊಸ ಚಿತ್ರಗಳನ್ನು ಮುಗಿಸಲು ಆದ್ಯತೆ ನೀಡಿದರೆ, ಇನ್ನಷ್ಟು ಮಂದಿ ಮಾಲ್ಡೀವ್ಸ್‌ನ ಸುಂದರ ಕಡಲತೀರಗಳತ್ತ ಧಾವಿಸಿದರು.

ತಾಪ್ಸಿ ಪನ್ನು, ವರುಣ್‌ ಧವನ್‌, ಟೈಗರ್‌ ಶ್ರಾಫ್‌, ದಿಶಾ ಪಟಾನಿ, ಮೌನಿ ರಾಯ್‌, ಅಂಗದ್‌ ಬೇಡಿ, ನೇಹಾ ಧೂಪಿಯಾ, ಕಿಯಾರಾ ಅಡ್ವಾನಿ, ಸಿದ್ಧಾರ್ಥ್‌ ಮಲ್ಹೋತ್ರಾ, ಸೋನಾಕ್ಷಿ ಸಿನ್ಹಾ, ರಕುಲ್‌ ಪ್ರೀತ್‌ ಸಿಂಗ್‌, ಕತ್ರೀನಾ ಕೈಫ್‌... ಹೀಗೆ ಮಾಲ್ಡೀವ್ಸ್‌ನ ಸಮುದ್ರದಂಡೆಗೆ ಹೋದವರ ಪಟ್ಟಿ ದೊಡ್ಡದಿದೆ.

ಒತ್ತಡವಾದಾಗ ಹೆಚ್ಚಿನವರು ತೆರಳುವುದು ಕಡಲ ತಡಿಗೆ. ಇದು ಮನಸು ಮತ್ತು ದೇಹಕ್ಕೆ ಚೈತನ್ಯ ನೀಡುತ್ತದೆ. ಚಿಂತೆಗಳ ಸಿಕ್ಕನ್ನು ಬಿಡಿಸಿ, ಆಲೋಚನೆಗೆ ಹೊಸ ಆಯಾಮ ನೀಡುತ್ತದೆ.

ಈಗ ಎಂದಲ್ಲ, ವಿದೇಶಗಳ ಸಾಗರ ತೀರಗಳಲ್ಲಿ ವಿಹರಿಸಲು ತಾರೆಯರು ಆಗಾಗ ಹೋಗುವುದು ಸಾಮಾನ್ಯ. ಇದಕ್ಕೂ ಕಾರಣವಿದೆ. ಕಡಲ ತಡಿಗೆ ಯಾರೇ ಹೋಗಲಿ ಮನಸ್ಸಿನ ತುಂಬ ಖುಷಿಯ ಅಲೆಗಳನ್ನು ಹೊತ್ತು ಬರುತ್ತಾರೆ. ಮೈಮನಸ್ಸಿಗೆ ಟಾನಿಕ್‌ನಂತೆ ಕೆಲಸ ಮಾಡುವುದರಿಂದ ಇದು ‘ಬೀಚ್‌ ಥೆರಪಿ’ ಅಥವಾ ‘ಓಷನ್‌ ಥೆರಪಿ’. ತಲೆಗೆ ಶಾಖ ನೀಡುವ ಸೂರ್ಯ, ಮನಸ್ಸನ್ನೂ ತಟ್ಟಿ ಸಮಾಧಾನಗೊಳಿಸುವ ಸಮುದ್ರದ ಅಲೆಗಳ ರಭಸ, ಕಾಲಿಗೆ ಕಚಗುಳಿಯಿಡುವ ಮರಳ ರಾಶಿ... ಇವಿಷ್ಟು ಸಾಕು ಮನಸ್ಸು ರಿಲ್ಯಾಕ್ಸ್‌ ಆಗಲು.

ಒತ್ತಡದಿಂದ ದೂರವಾಗಲು ಹೆಚ್ಚಿನ ತಾರೆಯರು ಮೊರೆಹೋಗುವುದು ಈ ಬೀಚ್‌ ಥೆರಪಿಗೆ. ದುಃಖ– ದುಮ್ಮಾನ, ಕಷ್ಟ, ಖಿನ್ನತೆ ಆವರಿಸಿದಾಗ ಕೊರಗುತ್ತ ಕೂಡದೇ ಕಡಲತಡಿಯ ಸಾನ್ನಿಧ್ಯ ಅರಸಿ ಹೋಗುವುದೇ ಉತ್ತಮ ಮಾರ್ಗ ಎಂಬುದನ್ನು ಇವರೆಲ್ಲ ಕಂಡುಕೊಂಡಿದ್ದಾರೆ.

ಅಭದ್ರತೆಯ ಭಾವವೂ ದೂರ
ಈ ಥೆರಪಿಯಲ್ಲಿ ಯಾರದ್ದೇ ಸಲಹೆ– ಉಪಚಾರದ ಅಗತ್ಯವಿಲ್ಲ. ಎಲ್ಲವನ್ನೂ ಸಮುದ್ರವೇ ನೀಡುತ್ತದೆ. ಮನಸ್ಸು, ದೇಹ, ಆತ್ಮಗಳಿಗೆ ಮದ್ದರೆಯುವ ಸಾಗರ, ತಲೆಯಲ್ಲಿ ತುಂಬಿಕೊಂಡ ಚಿಂತೆಗಳ ಸಿಕ್ಕುಗಳನ್ನು ಬಿಡಿಸಿ, ಆಲೋಚನೆಗಳಿಗೆ ಹೊಸ ಆಯಾಮ ನೀಡುತ್ತದೆ. ಹೊಸ ಚಿಂತನೆಗಳಿಗೆ ದಾರಿ ಮಾಡಿಕೊಡುತ್ತದೆ. ವಿಶಾಲ ಪರಿಸರವು ಅಭದ್ರತೆಯ ಭಾವವನ್ನು ದೂರ ಸರಿಸುತ್ತದೆ.

ಸಮುದ್ರದ ಅಗಾಧತೆಯು ನಮ್ಮ ಬಗ್ಗೆ ನಾವು ಮರುಚಿಂತನೆ ಮಾಡುವಂತೆ ಪ್ರಚೋದಿಸುತ್ತದೆ. ಅಂತರಾಳದ ಭಾವಗಳನ್ನು ಬಗೆದು ಹೊರತರುವ ಶಕ್ತಿಯೂ ಇಲ್ಲಿಯ ಪರಿಸರಕ್ಕಿದೆ. ಸೂರ್ಯ ಉದಯಿಸುವ ಅಥವಾ ಮುಳುಗುವ ನೈಸರ್ಗಿಕ ಪರಿಣಾಮಗಳನ್ನು ನೋಡುತ್ತ ಕುಳಿತುಕೊಳ್ಳುವುದೇ ಮಹದಾನಂದ. ಜವಾಬ್ದಾರಿಗಳ ಮೂಟೆ ಹೊತ್ತು ಸಾಗುವ ಬದುಕಿನಲ್ಲಿ ಆಗಾಗ ಚಿಂತೆಯ ಕಾರ್ಮೋಡ ಕವಿಯುವುದು ಸಹಜ. ಸಮುದ್ರದ ಜಲರಾಶಿಯು ನಾವು ಎಲ್ಲವನ್ನೂ ಮರೆಯುವಂತೆ ಮಾಡುತ್ತದೆ. ಅದರ ಅಗಾಧತೆಯಲ್ಲೇ ಮುಳುಗಿದಾಗ ನಮಗರಿವಿಲ್ಲದೆಯೇ ಚಿಂತೆಯ ಕಾರ್ಮೋಡ ಕಳೆದಿರುತ್ತದೆ.

ನಾಲ್ಕು ಗೋಡೆಗಳಿಂದ ಈಚೆ ಬಂದರೆ ಜಗತ್ತು ಎಷ್ಟು ಸುಂದರವಾಗಿದೆ ಎಂದು ಅರಿಯಬಹುದು. ವೇಗವಾಗಿ ಸಾಗುತ್ತಿರುವ ಜನರ ಬದುಕಿನಲ್ಲಿ ಈಗ ಒತ್ತಡವೇ ದೊಡ್ಡ ಶತ್ರುವಿನಂತಾಗಿದೆ. ನೀಲಿ ಆಗಸ, ತಿಳಿಹಳದಿ ಬಣ್ಣದ ಮರಳು, ಸದಾ ಚಲನಶೀಲವಾದ ವಿಶಾಲ ಜಲರಾಶಿ ಮನಸ್ಸು–ಆತ್ಮವನ್ನು ಶುದ್ಧೀಕರಿಸುವುದನ್ನು ಸ್ವತಃ ಕಂಡುಕೊಳ್ಳಬಹುದು.

ವಿಟಮಿನ್‌ ಡಿ
ದೈಹಿಕವಾಗಿಯೂ ಸಮುದ್ರವಿಹಾರ ಉಪಯುಕ್ತ. ನೈಸರ್ಗಿಕ ವಿಟಮಿನ್‌ ‘ಡಿ’ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಸಮುದ್ರದ ನೀರು ಚರ್ಮ, ಕೂದಲು, ಉಗುರುಗಳನ್ನು ಸ್ವಚ್ಛಗೊಳಿಸಿ ಹೊಸ ಕಾಂತಿ ನೀಡುತ್ತದೆ. ಮರಳಲ್ಲಿ ಓಡಾಡುವುದೇ ದೇಹಕ್ಕೆ ಚೈತನ್ಯದಾಯಕ. ಉಪ್ಪು ನೀರು ನಂಜು ನಿರೋಧಕವೂ ಆಗಿರುವುದರಿಂದ ಸಮುದ್ರಸ್ನಾನ ಅತ್ಯುಪಯುಕ್ತ.

ರಾತ್ರಿ ನಿದ್ದೆ ಬರದೇ ಒದ್ದಾಡುವವರೂ ಒಂದು ದಿನ ಸಮುದ್ರತೀರದಲ್ಲಿ ಕಳೆದರೆಂದರೆ ಆ ರಾತ್ರಿ ಗಾಢ ನಿದ್ದೆ ಆವರಿಸುವುದನ್ನು ಕಾಣಬಹುದು. ಹಾರ್ಮೋನ್‌ ಅಸಮತೋಲನವನ್ನೂ ಇದು ಸರಿಪಡಿಸುವುದಲ್ಲದೇ ಉದ್ವೇಗವನ್ನು ಕಡಿಮೆ ಮಾಡುವುದನ್ನು ವೈಜ್ಞಾನಿಕವಾಗಿ ಕಂಡುಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT