ಕೆಲವರಿಗೆ ಚಳಿಗಾಲ ಮುಗಿಯುವವರೆಗೂ ನೆಗಡಿಯ ಕಾಟ ತಪ್ಪಿದ್ದಲ್ಲ. ಏನು ಮಾಡಿದರೂ ನೀಗದ ಉಪದ್ರವ ಅದು. ಅಂತಹವರು ಊಟ-ಉಪಚಾರದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ನೆಗಡಿ, ಶೀತದ ತೊಂದರೆಗಳಿಂದ ಮುಕ್ತರಾಗಬಹುದು.
ಇಲ್ಲಿವೆ ಕೆಲವು ಮಾರ್ಗಗಳು-
*ಮುಂಜಾನೆ ಎದ್ದ ಕೂಡಲೇ ಒಂದು ಲೋಟ ಬಿಸಿ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸ, ಚಿಟಿಕೆ ಉಪ್ಪು, ಒಂದು ಚಮಚ ಚ್ಯವನ್ಪ್ರಾಶ್ ಲೇಹ್ಯವನ್ನು ಸೇರಿಸಿ ಬಿಸಿಯಾಗಿರುವಾಗಲೇ ಕುಡಿಯಿರಿ.
*11 ಗಂಟೆಗೆ ಗ್ರೀನ್ ಟೀ ಅಥವಾ ಕಶಾಯದ ಪುಡಿಯನ್ನು ನೀರಿನಲ್ಲಿ ಕುದಿಸಿ, ಶೋಧಿಸಿ ಕುಡಿಯಿರಿ.
(ಕಶಾಯ ಹೀಗೆ ತಯಾರಿಸಿ: ಸಾಮಗ್ರಿ- ಜೀರಿಗೆ ಅರ್ಧ ಬಟ್ಟಲು, ಮೆಣಸು, ದನಿಯಾ, ಗಸಗಸೆ ಕಾಲು ಬಟ್ಟಲು. ವಿಧಾನ- ಎಲ್ಲ ಸಾಮಗ್ರಿಗಳನ್ನೂ ಹುರಿದು ಪುಡಿ ಮಾಡಿ, ಅದರ ಜೊತೆಗೆ ಸ್ವಲ್ಪ ಬೆಲ್ಲ ಸೇರಿಸಿ ಇಟ್ಟುಕೊಂಡರೆ ಬೇಕಾದಾಗ ಅದನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು.)
*ಒಂದು ನೆಲ್ಲಿಕಾಯಿಯನ್ನು ಬೇಯಿಸಿ ಬೀಜ ತೆಗೆದು ಮೊಸರಿಗೆ ಸೇರಿಸಿ. ಅದಕ್ಕೆ ಜೀರಿಗೆ ಪುಡಿ ಹಾಕಿ ಚೆನ್ನಾಗಿ ಕಲಸಿ. ಒಣಮೆಣಸಿನಕಾಯಿ, ಸಾಸಿವೆ ಒಗ್ಗರಣೆ ಮಾಡಿ ತುಸು ಉಪ್ಪು ಹಾಕಿ ಊಟದ ಜೊತೆ ಸೇವಿಸಿ.
*ವಾರಕ್ಕೆ ಎರಡು ದಿನವಾದರೂ ಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿದ ರಸಂ ಅನ್ನು ಬಿಸಿ ಅನ್ನದೊಂದಿಗೆ ಸೇವಿಸಿ.
*ಮೆಂತೆ, ಪಾಲಕ್ ಅಥವಾ ಪುದೀನ ಸೊಪ್ಪಿನ ಸೂಪ್ ಅನ್ನು ಸಂಜೆಯ ಹೊತ್ತು ಕುಡಿಯಿರಿ.
*ರಾತ್ರಿ ಊಟದ ನಂತರ ಅರ್ಧ ಲೋಟ ಹಾಲು, ಅರ್ಧ ಲೋಟ ನೀರು ಸೇರಿಸಿ ಕಾಲು ಚಮಚ ಅರಿಶಿಣ ಹಾಕಿ ಕುದಿಸಿ ಬಿಸಿಯಾಗಿರುವಾಗಲೇ ಕುಡಿಯಿರಿ.
-