ಕರಣ್ ಸಿಂಗ್ ಉಚಿಯಾರ್ಡ ಅವರು ರಾಜಕೀಯದಲ್ಲಿ ಅನನುಭವಿಯಾದರೂ ಸಾಕಷ್ಟು ಹಣದ ಬಲ ಹೊಂದಿರುವವರು. ಆರಂಭದಲ್ಲಿ ಕಾಂಪೌಂಡರ್ ಕೆಲಸ ಮಾಡಿದ್ದ ಅವರು, 1996ರಿಂದಲೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೈತ್ಯರಾಗಿ ಬೆಳೆದಿದ್ದಾರೆ. ಕರಣ್ ಸಿಂಗ್ ಅವರ ಆಶಾಪೂರ್ಣ ಬಿಲ್ಡ್ಕಾನ್ ಕಂಪನಿಯು ಐಷಾರಾಮಿ ಮನೆ, ಬಂಗಲೆಗಳನ್ನು ನಿರ್ಮಿಸುವಲ್ಲಿ ಹೆಸರುವಾಸಿಯಾಗಿದೆ. ಗಾಳಿಯಂತ್ರ (ವಿಂಡ್ಮಿಲ್) ಯೋಜನೆಯನ್ನೂ ಅವರು ಕೈಗೆತ್ತಿಕೊಂಡಿದ್ದಾರೆ.
ಹಣಬಲವು ಕರಣ್ ಸಿಂಗ್ ಪರವಾಗಿದ್ದರೂ ಅವರು ಗೆಲ್ಲುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗಿದೆ. ಕಾಂಗ್ರೆಸ್ ನಾಯಕ ಅಶೋಕ್ ಗೆಹಲೋತ್ ಅವರನ್ನು ಕಡೆಗಣಿಸಿ ಸಚಿನ್ ಪೈಲಟ್ ಅವರೊಂದಿಗೆ ಕರಣ್ ಗುರುತಿಸಿಕೊಂಡಿದ್ದಾರೆ. ಇವರು ಕೂಡ ರಜಪೂತರಾದರೂ ಶೆಖಾವತ್ ಅವರ ಗೆಲುವಿನ ಅಂತರವನ್ನು ಕಡಿಮೆಗೊಳಿಸಬಹುದಷ್ಟೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯ ಪ್ರಬಲ ಅಭ್ಯರ್ಥಿಯ ವಿರುದ್ಧ ಅಖಾಡಕ್ಕೆ ಇಳಿದಿರುವ ಕರಣ್ ಸಿಂಗ್ ಅವರು ಹರಕೆಯ ಕುರಿಯಾಗಲು ಸಂತೋಷವಾಗಿಯೇ ಒಪ್ಪಿಕೊಂಡಿದ್ದಾರೆ. ಶೆಖಾವತ್ ವಿರುದ್ಧ ಸ್ಪರ್ಧಿಸಲು ಗೆಹಲೋತ್ ನಿರಾಕರಿಸಿದ ಕಾರಣ, 55 ವರ್ಷದ ಕರಣ್ ಅವರು ಕಾಂಗ್ರೆಸ್ನ ಏಕೈಕ ಆಯ್ಕೆಯಾಗಿದ್ದರು.