ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಾಂಡ್‌: ಸ್ವತಂತ್ರ ಭಾರತದ ಅತಿದೊಡ್ಡ ಹಗರಣ

ಶೆಮಿನ್ ಜಾಯ್‌
Published 22 ಮಾರ್ಚ್ 2024, 17:03 IST
Last Updated 22 ಮಾರ್ಚ್ 2024, 23:37 IST
ಅಕ್ಷರ ಗಾತ್ರ

ನವದೆಹಲಿ: ‘ಸ್ವತಂತ್ರ ಭಾರತದ ‘ಅತಿ ದೊಡ್ಡ ಭ್ರಷ್ಟಾಚಾರ ಹಗರಣ’ವಾದ ಚುನಾವಣಾ ಬಾಂಡ್‌ ಕುರಿತು ಸುಪ್ರೀಂ ಕೋರ್ಟ್‌ ತನ್ನ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಬೇಕು. ಜೊತೆಗೆ, ಚುನಾವಣಾ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿ ಹಲವು ಕಂಪನಿಗಳು ಹಲವು ಅನುಕೂಲಗಳನ್ನು ಪಡೆದುಕೊಂಡಿವೆ. ಆದ್ದರಿಂದ, ಕಾರ್ಪೊರೇಟ್‌–ರಾಜಕೀಯದ ಮಧ್ಯೆ ನಡೆದ ಅಪವಿತ್ರ ಮೈತ್ರಿಯ ಕುರಿತು ಎಲ್ಲ ಮಾಹಿತಿಗಳು ಬಹಿರಂಗಗೊಳ್ಳಬೇಕು’ ಎಂದು ಹೋರಾಟಗಾರರು, ವಕೀಲರು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಒತ್ತಾಯಪಡಿಸಿದ್ದಾರೆ.

‘ಹಲವು ಕಂಪನಿಗಳು ಬಿಜೆಪಿ ಪಕ್ಷಕ್ಕೆ ಕೋಟಿ ಕೋಟಿ ದೇಣಿಗೆ ನೀಡಿ, ಕೋಟಿ ಕೋಟಿ ಮೊತ್ತದ ಯೋಜನೆಗಳ ಗುತ್ತಿಗೆ ಪಡೆದುಕೊಂಡಿವೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷಕ್ಕೆ ದೇಣಿಗೆ ನೀಡಿ ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಗಳಿಂದ ಬಚಾವ್‌ ಆಗಿದ್ದಾರೆ. ಆದ್ದರಿಂದ, ಚುನಾವಣಾ ಬಾಂಡ್‌ ಮೂಲಕ ದೇಣಿಗೆ ನೀಡಿ, ಕಂಪನಿಗಳು ಹಾಗೂ ಉದ್ಯಮಿಗಳು ಹಲವು ಅನುಕೂಲವನ್ನು ಪಡೆದುಕೊಂಡಿರುವುದು ಇವುಗಳಿಂದ ಸಾಬೀತಾಗಿದೆ. 2ಜಿ ಹಗರಣ ಹಾಗೂ ಕಲ್ಲಿದ್ದಲು ಹಗರಣಗಳಲ್ಲಿ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದಂತೆಯೇ ಚುನಾವಣಾ ಬಾಂಡ್‌ ಹಗರಣದಲ್ಲಿಯೂ ತನಿಖೆ ನಡೆಯಬೇಕು’ ಎಂದು ಖ್ಯಾತ ವಕೀಲ ಪ್ರಶಾಂತ್‌ ಭೂಷಣ್‌ ಅವರು ಹೇಳಿದರು.

2ಜಿ ಹಗರಣ ಅಥವಾ ಕಲ್ಲಿದ್ದಲು ಹಗರಣದಲ್ಲಿ ಹಣದ ಅವ್ಯವಹಾರ ನಡೆದಿರಲಿಲ್ಲ. ಆದರೂ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಆದೇಶ ನೀಡಲಾಯಿತು. ಚುನಾವಣಾ ಬಾಂಡ್‌ ವಿಚಾರದಲ್ಲಿ ಹಣದ ಅವ್ಯವಹಾರ ನಡೆದಿದೆ.
ಪ್ರಶಾಂತ್‌ ಭೂಷಣ್‌, ಸುಪ್ರೀಂ ಕೋರ್ಟ್‌ ವಕೀಲ (ಚುನಾವಣಾ ಬಾಂಡ್‌ ಪ್ರಕರಣದಲ್ಲಿ ಎಡಿಆರ್‌ ಪರ ವಕಾಲತ್ತು ವಹಿಸಿದ್ದರು)

ಕೆಲವು ಉದಾಹರಣೆಗಳು

  • ಪ್ರಶಾಂತ್‌ ಭೂಷಣ್‌ ಅವರು ಕಾರ್ಪೊರೇಟ್‌–ರಾಜಕೀಯ ಅಪವಿತ್ರ ಮೈತ್ರಿಯ ಕುರಿತ ಹಲವು ಉದಾಹರಣೆಗಳನ್ನು ನೀಡಿದ್ದಾರೆ.

  • 33 ಕಂಪನಿಗಳು ಬಿಜೆಪಿಗೆ ₹1,751 ಕೋಟಿಯಷ್ಟು ದೇಣಿಗೆ ನೀಡಿವೆ. ಇದಕ್ಕೆ ಪ್ರತಿಯಾಗಿ ₹3.7 ಲಕ್ಷ ಕೋಟಿ ಮೊತ್ತದ ಯೋಜನೆಯ ಗುತ್ತಿಗೆ ಪಡೆದುಕೊಂಡಿವೆ

  • ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗಳಿಂದ ದಾಳಿಗೆ ಒಳಗಾಗಿದ್ದ 41 ಕಂಪನಿಗಳು, ಬಿಜೆಪಿಗೆ ₹2,471 ಕೋಟಿ ದೇಣಿಗೆ ನೀಡಿವೆ. ಇದಕ್ಕೆ ಪ್ರತಿಯಾಗಿ ಆ ಕಂಪನಿಗಳಿಗೆ ತನಿಖೆಗಳಿಂದ ಮುಕ್ತಿ ಸಿಕ್ಕಿದೆ. ₹2,471 ಕೋಟಿಯಲ್ಲಿ ₹1,698 ಕೋಟಿ ಹಣವು, ತನಿಖಾ ಸಂಸ್ಥೆಗಳ ದಾಳಿಯ ನಂತರ ಬಿಜೆಪಿಗೆ ಸಂದಾಯವಾಗಿದೆ

  • 49 ಪ್ರಕರಣಗಳಲ್ಲಿ ವಿವಿಧ ಕಂಪನಿಗಳು ಬಿಜೆಪಿಗೆ ದೇಣಿಗೆ ನೀಡಿದ ಬಳಿಕವಷ್ಟೇ, ₹62 ಸಾವಿರ ಮೌಲ್ಯದ ಯೋಜನೆಗಳ ಗುತ್ತಿಗೆಗಳನ್ನು ಪಡೆದುಕೊಂಡಿವೆ

  • 192 ಪ್ರಕರಣಗಳಲ್ಲಿ ವಿವಿಧ ಕಂಪನಿಗಳು ಬಿಜೆಪಿ ದೇಣಿಗೆ ನೀಡುವ ಮೊದಲೇ, ₹551 ಕೋಟಿ ಮೌಲ್ಯದ ಯೋಜನೆಗಳಿಗೆ ಗುತ್ತಿಗೆಗಳನ್ನು ಪಡೆದುಕೊಂಡಿವೆ

ಕಾರ್ಪೊರೇಟ್‌–ರಾಜಕೀಯ ಅಪವಿತ್ರ ಮೈತ್ರಿಯ ಕುರಿತು ಈ ಹಿಂದೆ ಸಾಕ್ಷ್ಯಸಹಿತ ಸಾಬೀತುಪಡಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಈಗ ಇದು ಸಾಧ್ಯವಿಲ್ಲ. ಈ ಅಪವಿತ್ರ ಮೈತ್ರಿಯ ಕುರಿತು ಯಾರೂ ಈಗ ಅಲ್ಲಗಳೆಯಲು ಸಾಧ್ಯವಿಲ್ಲ..
ಜಗದೀಪ್‌ ಚೊಕ್ಕಾರ್‌, ಸಹ ಸಂಸ್ಥಾಪಕ, ಅಸೋಸಿಯೇಷನ್‌ ಫಾರ್‌ ಡೆಮೊಕ್ರಟಿಕ್‌ ರೈಟ್ಸ್‌

ಅಬಕಾರಿ ನೀತಿ ಹಗರಣ ಮಾಫಿ ಸಾಕ್ಷಿಯಿಂದ ದೇಣಿಗೆ

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರ ಬಂಧನಕ್ಕೆ ಕಾರಣಕರ್ತರಾದ ಉದ್ಯಮಿ ಪಿ. ಶರತ್‌ ಚಂದ್ರ ರೆಡ್ಡಿ ಅವರು ಚುನಾವಣಾ ಬಾಂಡ್‌ ಮುಖಾಂತರ ಬಿಜೆಪಿಗೆ ₹56.5 ಕೋಟಿ ದೇಣಿಗೆ ನೀಡಿದ್ದಾರೆ. ಶರತ್‌ ಅವರು ಹೈದರಾಬಾದ್‌ ಮೂಲದ ಅರಬಿಂದೊ ಫಾರ್ಮಾ ಕಂಪನಿಯ ನಿರ್ದೇಶಕ ಮತ್ತು ದೆಹಲಿ ಅಬಕಾರಿ ನೀತಿ ಹಗರಣದ ಆರೋಪಿ ಕೂಡ. ನಂತರ ಕೆಲವು ತಿಂಗಳ ಬಳಿಕ ಶರತ್‌ ಅವರು ಪ್ರಕರಣದ ಮಾಫಿ ಸಾಕ್ಷಿಯಾದರು. ಅಬಕಾರಿ ನೀತಿ ಹಗರಣ ಸಂಬಂಧ ಶರತ್‌ ಅವರನ್ನು 2022ರ ನವೆಂಬರ್‌ 11ರಂದು ಬಂಧಿಸಲಾಗಿತ್ತು. ಇದಾದ ಐದು ದಿನಗಳ ಬಳಿಕವೇ ಶರತ್‌ ಅವರು ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ ₹5 ಕೋಟಿ ದೇಣಿಗೆ ನೀಡಿದ್ದಾರೆ. ಬಿಜೆಪಿ ಮಾತ್ರವಲ್ಲದೆ ಬಿಆರ್‌ಎಸ್‌ ಪಕ್ಷಕ್ಕೂ ಶರತ್‌ ಅವರು ಚುನಾವಣಾ ಬಾಂಡ್‌ ಮೂಲಕ ₹15 ಕೋಟಿ ದೇಣಿಗೆ ನೀಡಿದ್ದಾರೆ. ಆದರೆ, ದೊಡ್ಡ ಮೊತ್ತದ ದೇಣಿಗೆಯನ್ನು ಶರತ್ ಅವರು ಬಿಜೆಪಿಗೇ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT