ನವದೆಹಲಿ: ದೆಹಲಿ ಸರ್ಕಾರ ನಡೆಸುವ ಮೊಹಲ್ಲಾ ಕ್ಲಿನಿಕ್ಗಳಲ್ಲಿ ಖಾಸಗಿ ಲ್ಯಾಬ್ಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ನಕಲಿ ರೋಗನಿರ್ಣಯ ಪರೀಕ್ಷೆಗಳನ್ನು ಶಿಫಾರಸು ಮಾಡಿದ ಆರೋಪದ ಮೇಲೆ ಸಿಬಿಐ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಗುಣಮಟ್ಟದ ಪ್ರಮಾಣಿತ ಪರೀಕ್ಷೆಗಳಲ್ಲಿ’ ವಿಫಲವಾದ ಔಷಧಗಳನ್ನು ದೆಹಲಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗಿದೆ ಎಂಬ ಆರೋಪ ಕುರಿತು ಸಿಬಿಐ ತನಿಖೆಗೆ ಸಕ್ಸೇನಾ ಆದೇಶಿಸಿದ್ದರು. ಅದಾದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
"ಕಳೆದ ವರ್ಷ, ಮೊಹಲ್ಲಾ ಕ್ಲಿನಿಕ್ಗಳಿಗೆ ವೈದ್ಯರು ಬರುತ್ತಿಲ್ಲ, ಆದರೂ ಬಂದಿದ್ದಾರೆ ಎಂದು ದಾಖಲಾತಿಯಲ್ಲಿ ತೋರಿಸಲಾಗಿತ್ತು. ವೈದ್ಯರ ಅನುಪಸ್ಥಿತಿಯ ಹೊರತಾಗಿಯೂ ಪರೀಕ್ಷೆಗಳು ಮತ್ತು ಔಷಧಿಗಳನ್ನು ಶಿಫಾರಸು ಮಾಡಲಾಗುತ್ತಿದೆ ಎಂಬುದು ಕಂಡುಬಂದಿತ್ತು. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಾಗಿದೆ’ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆಯ ಬಗ್ಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷದಿಂದ (ಎಎಪಿ) ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.