ಅಮರಾವತಿ: ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ನುಜಿವಿಡು ಬಳಿ ಭಾನುವಾರ ಮುಂಜಾನೆ ಸಂಭವಿಸಿದ ಹಿಟ್ ಅಂಡ್ ರನ್ ಅಪಘಾತದಲ್ಲಿ ಆರು ಕೃಷಿ ಕಾರ್ಮಿಕರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ.
ಸಂತ್ರಸ್ತರು ವಿಜಯವಾಡದಿಂದ ಸುಮಾರು 55 ಕಿ.ಮೀ ದೂರದಲ್ಲಿರುವ ನುಜಿವಿಡು ಬಳಿಯ ಬುಡಕಟ್ಟು ಕುಗ್ರಾಮವಾದ ಲಿಯಾನ್ ತಾಂಡಾಗೆ ಸೇರಿದವರು ಮತ್ತು ಅವರು ಆಟೋರಿಕ್ಷಾದಲ್ಲಿ ಹತ್ತಿರದ ಹಳ್ಳಿಗೆ ತೆರಳುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಸ್ಥಳದಲ್ಲೇ ಆರು ಜನರು ಮೃತಪಟ್ಟಿದ್ದು, 8 ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹತ್ತಿರದ ನುಜಿವಿಡು ಮತ್ತು ವಿಜಯವಾಡದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.
ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣವಾದ ವಾಹನವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ ಎಂದು ನುಜಿವಿಡು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಶ್ರೀನಿವಾಸುಲು ತಿಳಿಸಿದ್ದಾರೆ.
ಆಂಧ್ರಪ್ರದೇಶದ ರಾಜ್ಯಪಾಲರಾದ ವಿಶ್ವಭೂಷಣ್ ಹರಿಚಂದನ್, ಉಪಮುಖ್ಯಮಂತ್ರಿ (ಆರೋಗ್ಯ) ಕೆ.ಕೆ. ಶ್ರೀನಿವಾಸ್, ಗೃಹ ಸಚಿವ ಎಂ ಸುಚರಿತ, ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಮತ್ತು ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸಂತಾಪ ಸೂಚಿಸಿದ್ದಾರೆ.
ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಉಪಮುಖ್ಯಮಂತ್ರಿ ಶ್ರೀನಿವಾಸ್ ಅವರು ಕೃಷ್ಣ ಜಿಲ್ಲಾ ವೈದ್ಯಕೀಯ ಅಧಿಕಾರಿಗೆ ನಿರ್ದೇಶನ ನೀಡಿದ್ದು, ಮೃತರ ರಕ್ತಸಂಬಂಧಿಗಳಿಗೆ ಸರ್ಕಾರದಿಂದ ನೆರವು ನೀಡುವ ಭರವಸೆ ನೀಡಿದ್ದಾರೆ.