ಗೋರಖ್ಪುರ: 7 ವರ್ಷದ ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿಗಳು, ಅತ್ಯಾಚಾರ ಎಸಗಿ, ರಕ್ತಸ್ರಾವದಿಂದ ಬಳಲುತ್ತಿದ್ದ ಆಕೆಯನ್ನು ಹೊಲದಲ್ಲಿಎಸೆದು ಹೋದ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನಿಬುವಾ ನೌರಂಗಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ಎಎಸ್ಪಿ ಎ.ಪಿ.ಸಿಂಗ್ ಶನಿವಾರ ತಿಳಿಸಿದರು.
‘ಶುಕ್ರವಾರ ಸಂಜೆ ಕುಟುಂಬದವರೊಂದಿಗೆ ಮನೆ ಹೊರಗೆ ಬಾಲಕಿ ಕುಳಿತಿದ್ದಳು. ಮನೆಯವರೆಲ್ಲಾ ಊಟಕ್ಕೆ ಒಳಗೆ ಹೋಗಿದ್ದಾರೆ. ನಂತರ ಅವರು ಬಂದು ನೋಡಿದಾಗ ಬಾಲಕಿ ಕಾಣಿಸಲಿಲ್ಲ. ಹೀಗಾಗಿ ಅವರು ಆಕೆಯ ಹುಡುಕಾಟ ಆರಂಭಿಸಿದರು’ ಎಂದು ಅವರು ಹೇಳಿದರು.
‘ಮನೆ ಸಮೀಪದ ಹೊಲವೊಂದರಲ್ಲಿ ಪತ್ತೆಯಾದ ಬಾಲಕಿ, ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದಳು. ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ವೈದ್ಯರ ಸಲಹೆಯ ಮೇರೆಗೆ ಬಾಲಕಿಯನ್ನು ಗೋರಖ್ಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದೂ ಅವರು ತಿಳಿಸಿದರು.
‘ಅಪರಿಚಿತ ವ್ಯಕ್ತಿಗಳ ವಿರುದ್ಧ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು’ ಎಂದು ಸಿಂಗ್ ಹೇಳಿದರು.