ಜೈಪುರ:ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅನ್ನು ₹ 500ಕ್ಕೆ ನೀಡುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಜನತೆಗೆ ಭರವಸೆ ನೀಡಿದ್ದಾರೆ.
ಅಲ್ವಾರ್ನಲ್ಲಿ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
₹ 1050ಕ್ಕೆ ದೊರೆಯುವ ಗ್ಯಾಸ್ ಸಿಲಿಂಡರ್ ಅನ್ನು ಕೇವಲ ₹500ಕ್ಕೆ ನೀಡಲಿದ್ದೇವೆ. ಈ ಯೋಜನೆ ಏಪ್ರಿಲ್ ತಿಂಗಳಿಂದ ಜಾರಿಗೆ ಬರಲಿದೆ ಎಂದುಹೇಳಿದರು.
ಮುಂದಿನ ತಿಂಗಳು ಮಂಡಿಸುವ ಬಜೆಟ್ನಲ್ಲಿ ರಾಜ್ಯದಲ್ಲಿ ಹಣದುಬ್ಬರ ತಗ್ಗಿಸಲು ಕ್ರಮಕೈಗೊಳ್ಳಲಾಗುವುದು. ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಕಿಚನ್ ಕಿಟ್ ವಿತರಿಸುವ ಯೋಜನೆಯನ್ನು ಘೋಷಣೆ ಮಾಡಿ, ಏಪ್ರಿಲ್ನಿಂದಜಾರಿಗೆ ತರಲಾಗುವುದು ಎಂದರು.
ವಿದ್ಯಾರ್ಥಿಗಳು, ಯುವ ಜನರು, ಮಹಿಳೆಯರು, ರೈತರಿಗೆ ಮುಂದಿನ ಬಜೆಟ್ನಲ್ಲಿ ಗುಡ್ ನ್ಯೂಸ್ ನೀಡಲಾಗುವುದು ಎಂದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.