ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ: ಸಿದ್ಧತೆ ಪರಿಶೀಲಿಸಿದ ಉತ್ತರಾಖಂಡ ಸಿಎಂ ಧಾಮಿ

ಡೆಹ್ರಾಡೂನ್: ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 5ರಂದು ಕೇದಾರನಾಥಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬುಧವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ.
ಸಚಿವ ಸಂಪುಟ ಸಹೋದ್ಯೋಗಿಗಳಾದ ಹರಕ್ ಸಿಂಗ್ ರಾವತ್, ಸುಬೋಧ್ ಉನಿಯಾಲ್ ಜತೆ ಸ್ಥಳಕ್ಕೆ ಭೇಟಿ ನೀಡಿದ ಧಾಮಿ, ದೇಗುಲದ ಬಳಿ ನಡೆಯುತ್ತಿರುವ ಎಲ್ಲ ಕೆಲಸ ಕಾರ್ಯಗಳನ್ನು ಪರಿಶೀಲಿಸಿದರು.
‘ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಕೆಲವು ಸಣ್ಣ ಕೆಲಸಗಳು ಬಾಕಿ ಇದ್ದು ಬುಧವಾರ ಸಂಜೆ ವೇಳೆಗೆ ಕೊನೆಗೊಳ್ಳಲಿವೆ’ ಎಂದು ಧಾಮಿ ಹೇಳಿದ್ದಾರೆ.
ಓದಿ: ನ.5ರಂದು ಕೇದಾರನಾಥಕ್ಕೆ ಮೋದಿ ಭೇಟಿ: ಶಂಕರಾಚಾರ್ಯರ ಸಮಾಧಿ ಉದ್ಘಾಟನೆ
‘ಜಗತ್ತಿನೆಲ್ಲೆಡೆಯ ಜನರು ಶಾಂತಿಗಾಗಿ ಆಗಮಿಸುವ ಈ ಕ್ಷೇತ್ರವನ್ನು ವಿಶ್ವದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಜಧಾನಿಯನ್ನಾಗಿ ಮಾಡಬೇಕು ಎಂಬುದು ಪ್ರಧಾನಿಯವರ ಆಶಯವಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಧಾನಿಯವರ ಆಶಯವನ್ನು ಸಾಕಾರಗೊಳಿಸಲು ಕೇದಾರನಾಥದಲ್ಲಿ ಅಭಿವೃದ್ಧಿಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಮೋದಿ ಅವರು ಕೇದಾರನಾಥ ಭೇಟಿ ವೇಳೆ ₹400 ಕೋಟಿ ಮೊತ್ತದ ಕೇದಾರಪುರಿ ಮರುನಿರ್ಮಾಣ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜತೆಗೆ, ಮರು ನಿರ್ಮಾಣಗೊಂಡಿರುವ ಆದಿ ಗುರು ಶಂಕರಾಚಾರ್ಯರ ಸಮಾಧಿ ಮತ್ತು ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಲಿದ್ದಾರೆ. ಶಂಕರಾಚಾರ್ಯರ ಸಮಾಧಿಗೆ 2013ರ ಪ್ರವಾಹದ ಸಂದರ್ಭ ಹಾನಿಯಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.