ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಮಾಲಿನ್ಯ: ಕೆಲ ರಾಜ್ಯಗಳಲ್ಲಿ ವ್ಯಕ್ತಿಯ ಆಯುಷ್ಯದಲ್ಲಿ 2.5 ವರ್ಷ ಇಳಿಕೆ ಸಂಭವ!

ಷಿಕಾಗೊ ವಿಶ್ವವಿದ್ಯಾಲಯದಿಂದ ಅಧ್ಯಯನ
Last Updated 1 ಸೆಪ್ಟೆಂಬರ್ 2021, 7:17 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ಭೌಗೋಳಿಕವಾಗಿ ವಿಸ್ತರಿಸಿದೆ. ಇದು ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ವ್ಯಕ್ತಿಯ ಜೀವಿತಾವಧಿ ಕಡಿಮೆಯಾಗಲು ಕಾರಣವಾಗಿದೆ ಎಂದು ಹೊಸ ಅಧ್ಯಯನ ಹೇಳಿದೆ.

ಷಿಕಾಗೊ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್‌ಟಿಟ್ಯೂಟ್‌ ಸಿದ್ಧಪಡಿಸಿರುವ ‘ಏರ್‌ ಕ್ವಾಲಿಟಿ ಲೈಫ್‌ ಇಂಡೆಕ್ಸ್‌’ (ಎಕ್ಯೂಎಲ್‌ಐ) ಎಂಬ ಅಧ್ಯಯನ ವರದಿಯಲ್ಲಿ ಈ ಕಳವಳಕಾರಿ ಅಂಶಗಳಿವೆ.

ಶುದ್ಧ ಗಾಳಿಯನ್ನು ಉಸಿರಾಡುವ ವ್ಯಕ್ತಿಯ ಆಯುಷ್ಯ ಎಷ್ಟಿರಲಿದೆ ಎಂಬ ಬಗ್ಗೆ ವಿಶ್ವವಿದ್ಯಾಲಯ ಅಧ್ಯಯನ ಕೈಗೊಂಡಿತ್ತು.

ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ವಾಯುಮಾಲಿನ್ಯ ಪ್ರಮಾಣದಲ್ಲಿ ವಿಪರೀತ ಹೆಚ್ಚಳ ಕಂಡುಬಂದಿದೆ. ಈ ಎರಡು ರಾಜ್ಯಗಳಲ್ಲಿನ ವ್ಯಕ್ತಿಯ ಸರಾಸರಿ ಆಯಸ್ಸು 2.5 ರಿಂದ 2.9 ವರ್ಷಗಳಷ್ಟು ಕಡಿಮೆಯಾಗಲು ವಾಯುಮಾಲಿನ್ಯ ಕಾರಣವಾಗಿದೆ ಎಂದು ಈ ಅಧ್ಯಯನ ಹೇಳಿದೆ.

‘ಗಂಗಾ ನದಿ ಪಾತ್ರದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಶೇ 40ರಷ್ಟು ಜನರು ವಾಸ ಮಾಡುತ್ತಿದ್ದಾರೆ. ವಿಶ್ವದ ಇತರ ಯಾವುದೇ ಪ್ರದೇಶಕ್ಕೆ ಹೋಲಿಸಿದರೂ, ಈ ಪ್ರದೇಶದಲ್ಲಿ ಮಾಲಿನ್ಯದ ಪ್ರಮಾಣವೂ ಅಧಿಕ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಉತ್ತರ ಭಾರತದಲ್ಲಿ 2019ರಲ್ಲಿ ದಾಖಲಾಗಿದ್ದ ಮಾಲಿನ್ಯದ ಮಟ್ಟ ಅದೇ ಪ್ರಮಾಣದಲ್ಲಿಯೇ ಮುಂದುವರಿದರೆ, ಆ ಭಾಗದ ಜನರು ತಮ್ಮ ಆಯುಷ್ಯದಲ್ಲಿ 9ಕ್ಕೂ ಹೆಚ್ಚು ವರ್ಷಗಳನ್ನು ಕಳೆದುಕೊಳ್ಳುವರು’ ಎಂದು ಈ ಅಧ್ಯಯನ ನಡೆಸಿರುವ ತಜ್ಞರು ಎಚ್ಚರಿಸಿದ್ದಾರೆ.

‘ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಪ್ರಕಾರ ಮಾಲಿನ್ಯದ ಪ್ರಮಾಣವನ್ನು ಕಡಿಮೆ ಮಾಡಿದರೆ, ಭಾರತ, ಬಾಂಗ್ಲಾದೇಶ, ನೇಪಾಳ ಹಾಗೂ ಪಾಕಿಸ್ತಾನಗಳಲ್ಲಿ ವಾಸಿಸುವ ವ್ಯಕ್ತಿ 5.6 ವರ್ಷಗಳಷ್ಟು ಹೆಚ್ಚು ಅವಧಿಗೆ ಜೀವಿಸಲು ಸಾಧ್ಯ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT