ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ದುಡಿಯುವ ಕಾರ್ಮಿಕರು ಮೊಬೈಲ್ ಆ್ಯಪ್ ಮೂಲಕ ತಮ್ಮ ಹಾಜರಿ ನಮೂದಿಸಬೇಕು ಎಂಬ ಕೇಂದ್ರದ ನಡೆಯನ್ನು ಕಾಂಗ್ರೆಸ್ ಬುಧವಾರ ವಿರೋಧಿಸಿದೆ.
ಇಂಥ ಕ್ರಮದ ಹಿಂದೆ, ನರೇಗಾ ಯೋಜನೆಗೆ ಬಜೆಟ್ನಲ್ಲಿ ಮೀಸಲಿಡುವ ಅನುದಾನವನ್ನು ಕಡಿತಗೊಳಿಸುವ ಉದ್ದೇಶ ಇದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಬಡ ಜನರ ಬಗ್ಗೆ ಸಂವೇದನೆ ಇಲ್ಲ ಎಂಬುದನ್ನು ಈ ನಡೆ ತೋರಿಸಿದೆ’ ಎಂದೂ ಅವರು ಆರೋಪಿಸಿದ್ದಾರೆ.
ನರೇಗಾ ಅಡಿ ದುಡಿಯುವ ಕಾರ್ಮಿಕರು ಭೌತಿಕವಾಗಿ ತಮ್ಮ ಹಾಜರಿಯನ್ನು ನಮೂದಿಸುವ ಬದಲು ಮೊಬೈಲ್ ಆ್ಯಪ್ ಮೂಲಕ ದಾಖಲಿಸುವುದನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ ಕಡ್ಡಾಯಗೊಳಿಸಿದೆ ಎಂದೂ ಅವರು ಹೇಳಿದ್ದಾರೆ.