ಗುವಾಹಟಿ: ರಾಜ್ಯದ ಪ್ರತಿಪಕ್ಷದ ಶಾಸಕರು ಆಡಳಿತ ಪಕ್ಷವಾದ ಬಿಜೆಪಿಗೆ ಸೇರುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆಹ್ವಾನ ನೀಡಿದ್ದಾರೆ.
ನಾಲ್ಕು ಬಾರಿಯ ಕಾಂಗ್ರೆಸ್ ಶಾಸಕರಾಗಿದ್ದ ರೂಪಜ್ಯೋತಿ ಕುರ್ಮಿ ಅವರು ಬಿಜೆಪಿ ಸೇರುವುದಾಗಿ ಪ್ರಕಟಿಸಿದ ಮರು ದಿನವಾದ ಶನಿವಾರ ಮುಖ್ಯಮಂತ್ರಿ ಈ ಹೇಳಿಕೆ ನೀಡಿದ್ದಾರೆ.
‘ವಿರೋಧ ಪಕ್ಷದಲ್ಲಿ ಐದು ವರ್ಷ ಇದ್ದು ಏನು ಮಾಡುತ್ತೀರಿ. ಆಡಳಿತ ಪಕ್ಷದೊಂದಿಗೆ ಕೈಜೋಡಿಸಿ. ಜಾತಿ, ಧರ್ಮ, ಪ್ರದೇಶದ ತಾರತಮ್ಯಗಳನ್ನು ಬಿಟ್ಟು ಜನರ ಕಲ್ಯಾಣಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ನಮ್ಮೊಂದಿಗೆ ಸೇರಿ’ ಎಂದು ಮನವಿ ಮಾಡಿದರು.