ನವದೆಹಲಿ: ಪಂಜಾಬ್, ಉತ್ತರಾಖಂಡ, ಗೋವಾ ವಿಧಾನಸಭೆ ಚುನಾವಣೆಯಲ್ಲಿ ಎದುರಾಗಿರುವ ಅನಿರೀಕ್ಷಿತ ಸೋಲಿನ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶೀಘ್ರವೇ ಪಕ್ಷದ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯೂಸಿ) ಸಭೆ ಕರೆಯುವ ಸಾಧ್ಯತೆ ಇದೆ.
ಪಂಜಾಬ್ನಲ್ಲಿ ಪಕ್ಷ ಅಧಿಕಾರ ಕಳೆದುಕೊಳ್ಳಲು ಅಮರಿಂದರ್ ಸಿಂಗ್ ಅವರ ನಾಲ್ಕೂವರೆ ವರ್ಷಗಳ ಅವಧಿಯ ದುರಾಡಳಿತವೇ ಕಾರಣ ಎಂದೂ ಪಕ್ಷಆರೋಪಿಸಿದೆ. ಬಹುತೇಕ ಮುಂದಿನ ವಾರ ನಡೆಯಲಿರುವ ಸಿಡಬ್ಲ್ಯೂಸಿ ಸಭೆಯಲ್ಲಿ ಈ ಎಲ್ಲ ವಿಷಯಗಳ ಕುರಿತು ಗಂಭೀರ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಆಂತರಿಕ ಕಚ್ಚಾಟ ಹಾಗೂ ನಾಯಕತ್ವದ ಕೊರತೆ ಸೋಲಿಗೆ ಪ್ರಮುಖ ಕಾರಣ ಎಂಬುದನ್ನು ಮನಗಂಡಿರುವ ಪಕ್ಷದ ವರಿಷ್ಠರು, ಚುನಾವಣಾ ಪ್ರಚಾರದ ಸಂದರ್ಭ ಆಂತರಿಕ ಭಿನ್ನಾಭಿಪ್ರಾಯ ಹೊರಹಾಕಿದ್ದ ನವಜೋತ್ ಸಿಂಗ್ ಸಿಧು ಅವರಿಂದ ಸೋಲಿಗೆ ಕಾರಣವಾದ ಸೂಕ್ಷ್ಮ ಅಂಶಗಳ ಕುರಿತು ವಿವರ ಪಡೆಯಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.