ನವದೆಹಲಿ: ವಿರೋಧ ಪಕ್ಷಗಳಿಂದ ಉಪರಾಷ್ಟ್ರಪತಿ ಚುನಾವಣೆಅಭ್ಯರ್ಥಿಯಾಗಿರುವ ಕರ್ನಾಟಕ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವ ಅವರು, ‘ಹೊಸ ಭಾರತದ ನೇತೃತ್ವ ವಹಿಸಿರುವ ‘ಬಿಗ್ ಬ್ರದರ್’ ಒಬ್ಬರು ಸಂಸದರ ಹಾಗೂ ರಾಜಕೀಯ ಪಕ್ಷಗಳ ನಾಯಕರ ಪೋನ್ ಕರೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಅವರು, ನಿನ್ನೆಯಷ್ಟೇ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ತನ್ನ ಗ್ರಾಹಕರ ಕರೆಗಳನ್ನು ಡೈವರ್ಟ್ ಮಾಡುತ್ತಿದೆ ಎಂದು ತಮ್ಮದೇ ಉದಾಹರಣೆ ಕೊಟ್ಟು ಆರೋಪ ಮಾಡಿದ ಬೆನ್ನಲ್ಲೇ ಮತ್ತೊಂದು ಗುರುತರ ಹೇಳಿಕೆಯನ್ನು ಇಂದು ನೀಡಿದ್ದಾರೆ.
ಆದರೆ, ಆ ‘ಬಿಗ್ ಬ್ರದರ್’ ಯಾರು ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ. ‘ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಿಗೆ ನಾನು ಮಾಡಿದ ಕರೆಗಳು ಹಾಗೂ ಒಳಬಂದ ಕರೆಗಳು ಡೈವರ್ಟ್ ಆಗಿದ್ದವು’ ಎಂದು ನಿನ್ನೆ ದೂರಿದ್ದರು.
ಈ ಬಗ್ಗೆ ಅವರು ಬಿಎಸ್ಎನ್ಎಲ್ಗೆ ದೂರು ಸಹ ನೀಡಿದ್ದರು. ಬಳಿಕ ಬಿಎಸ್ಎನ್ಎಲ್ನಿಂದ ತಮ್ಮ ಸಮಸ್ಯೆ ಸರಿಹೋಗಿದೆ ಎಂದೂ ಕೂಡ ಟ್ವೀಟ್ನಲ್ಲಿ ತಿಳಿಸಿದ್ದರು.
‘ಇತ್ತೀಚೆಗೆ ಅನೇಕ ಎಂಪಿಗಳು ಹಾಗೂ ರಾಜಕೀಯ ನಾಯಕರು ಮೇಲಿಂದ ಮೇಲೆ ತಮ್ಮ ಮೊಬೈಲ್ಗಳನ್ನು ಹಾಗೂ ಸಿಮ್ ಕಾರ್ಡುಗಳನ್ನು ಬದಲಿಸುತ್ತಿದ್ದಾರೆ. ಇಂತಹ ಭಯ ಪ್ರಜಾಪ್ರಭುತ್ವವನ್ನು ಕೊಲ್ಲುತ್ತದೆ’ ಎಂದು ಆಳ್ವ ಹೇಳಿದ್ದಾರೆ.ಆದರೆ, ಅನೇಕ ಬಿಜೆಪಿ ನಾಯಕರುಮಾರ್ಗರೇಟ್ ಆಳ್ವ ಅವರ ಆರೋಪಗಳನ್ನು ತಳ್ಳಿಹಾಕಿದ್ದಾರೆ.
The fear that ‘Big Brother’ is always watching & listening permeates all conversations between politicians across party lines in ‘new’ India. MPs & leaders of parties carry multiple phones, frequently change numbers & talk in hushed whispers when they meet. Fear kills democracy.
— Margaret Alva (@alva_margaret) July 26, 2022
ಇನ್ನು ಎನ್ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಅವರು ಉಪರಾಷ್ಟ್ರಪತಿ ಚುನಾವಣಾ ಕಣದಲ್ಲಿದ್ದಾರೆ.
ಏತನ್ಮಧ್ಯೆ ಪ್ರಮುಖ ವಿರೋಧ ಪಕ್ಷವಾಗಿರುವ ಟಿಎಂಸಿಉಪರಾಷ್ಟ್ರಪತಿ ಚುನಾವಣೆಯಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಹೇಳಿದೆ. ಮಮತಾ ಬ್ಯಾನರ್ಜಿ ಅವರ ಈ ನಡೆಯನ್ನು ಆಳ್ವ ಖಂಡಿಸಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಭಾಗಿಯಾಗದಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ನಿರ್ಧಾರ ನಿರಾಶಾದಾಯಕ ಎಂದು ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವ ಹೇಳಿದ್ದರು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಭಾಗಿಯಾಗುವುದಿಲ್ಲ ಎಂಬ ಟಿಎಂಸಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಅವರು, ‘ಅಹಂ, ಪ್ರತಿಷ್ಠೆ ಹಾಗೂ ಕೋಪಕ್ಕೆ ಇದು ಸಮಯವಲ್ಲ’ ಎಂದು ಅಭಿಪ್ರಾಯಪಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.