ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ವಿಷಕಾರಿ ಮದ್ಯ ಸೇವನೆ, ಮೃತರ ಸಂಖ್ಯೆ 20ಕ್ಕೆ ಏರಿಕೆ

Last Updated 14 ಡಿಸೆಂಬರ್ 2022, 14:34 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದ ಸರನ್ ಜಿಲ್ಲೆಯಲ್ಲಿ ಕಳ್ಳಬಟ್ಟಿ ಸೇವಿಸಿಮೃತಪಟ್ಟವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಕಳ್ಳಬಟ್ಟಿ ಸೇವಿಸಿ ಇಂದು ಒಂದೇ ದಿನಆರು ಮಂದಿ ಸಾವಿಗೀಡಾಗಿದ್ದಾರೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.

‘ಸ್ಥಳೀಯ ಅಂಗಡಿಯೊಂದರಲ್ಲಿ ಹಲವರು ಒಟ್ಟಾಗಿ ಮಂಗಳವಾರ ರಾತ್ರಿ ಮದ್ಯ ಸೇವಿಸಿದ್ದರು. ಮನೆಗೆ ಹಿಂತಿರುಗಿದಾಗ ಕೆಲವರು ಅಸ್ವಸ್ಥರಾದರು. ಈ ಪೈಕಿ ಆರು ಮಂದಿ ಸಾವಿಗೀಡಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಇಶುವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಕೈಗೊಳ್ಳಲಾಗಿದೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ಕುಮಾರ್ ತಿಳಿಸಿದ್ದಾರೆ.

2016ರ ಏಪ್ರಿಲ್‌ನಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಿದೆ.

ವಿಧಾನಸಭೆಯಲ್ಲಿ ಬಿಜೆಪಿ ಗದ್ದಲ:ಕಳ್ಳಬಟ್ಟಿ ದುರಂತದ ವಿಷಯವು ಬಿಹಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

ವಿಧಾನಸಭೆಯೊಳಗೆ ಗದ್ದಲ ಸೃಷ್ಟಿಸಿದ ಬಿಜೆಪಿಯ ಶಾಸಕರು ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ,ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬದ ಸದಸ್ಯರಿಗೆ ಪರಿಹಾರ ನೀಡಬೇಕು ಎಂದು ಘೋಷಣೆ ಕೂಗಿದರು. ‌

ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ, ‘ಬಿಹಾರದಲ್ಲಿ ಮದ್ಯ ಸೇವಿಸುವುದು ಅಪರಾಧ ಎಂಬುದನ್ನು ಬಿಜೆಪಿ ಸದಸ್ಯರು ಅರ್ಥಮಾಡಿಕೊಳ್ಳಬೇಕು. ಇದರಿಂದ ಉಂಟಾಗುವ ಸಾವಿಗೆ ಯಾವುದೇ ಪರಿಹಾರ ನೀಡಲಾಗದು.ಒಂದು ವೇಳೆ ನೀಡಿದರೆ ಇದು ಮದ್ಯಸೇವನೆಯನ್ನು ಬೆಂಬಲಿಸುವುದಕ್ಕೆ ಸಮಾನವಾಗಿರುತ್ತದೆ’ ಎಂದರು.

ಪಟ್ಟುಬಿಡದ ಬಿಜೆಪಿ ಶಾಸಕರು ಮತ್ತೆ ಗದ್ದಲ ಎಬ್ಬಿಸಿದಾಗ, ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರು ಕಲಾಪವನ್ನು 15 ನಿಮಿಷಗಳ ಅವಧಿಗೆ ಮುಂದೂಡಿದರು. ಕಲಾಪ ಪುನರ್ ಆರಂಭವಾದಾಗಲೂ ಅಶಿಸ್ತು ಮುಂದುವರಿಯಿತು. ಶೂನ್ಯವೇಳೆಯಲ್ಲಿ ವಿರೋಧಪಕ್ಷದವರು ಮುಖ್ಯಮಂತ್ರಿಯವರ ರಾಜೀನಾಮೆಗೆ ಆಗ್ರಹಿಸಿದರು.

ಲೋಕಸಭೆಯಲ್ಲೂ ಪ್ರಸ್ತಾಪ:ಲೋಕಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿಯ ಸಂಸದ ಜನಾರ್ದನ ಸಿಂಗ್ ಸಿಗ್ರಿವಾಲಾ ಅವರು, ಬಿಹಾರದ ಕಳ್ಳಬಟ್ಟಿ ದುರಂತದ ಕುರಿತು ಪ್ರಸ್ತಾಪಿಸಿ, ಸರನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

‘ಬಿಹಾರದಲ್ಲಿ ಪ್ರತಿದಿನ ನೂರಾರು ಜನರು ಅಕ್ರಮ ಮದ್ಯ ಸೇವಿಸಿ ಸಾಯುತ್ತಿದ್ದಾರೆ. ಬುಧವಾರ ನಡೆದ ದುರಂತದಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ’ ಎಂದು ಜನಾರ್ದನ್ ಆರೋಪಿದರು.

ಗೋರಖ್‌ಪುರ ಕ್ಷೇತ್ರದ ಬಿಜೆಪಿ ಸಂಸದರವಿ ಕಿಶನ್ ಶುಕ್ಲಾ ಅವರು ಜಿಮ್‌ಗಳಲ್ಲಿ ಯುವ ನಟರು ಸಾವಿಗೀಡಾಗುತ್ತಿರುವ ವಿಷಯವನ್ನು ಪ್ರಸ್ತಾಪಿಸಿದರು. ಕೇಂದ್ರ ಆರೋಗ್ಯ ಸಚಿವಾಲಯವು ಈ ವಿಷಯವನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT