ಪಾಟ್ನಾ: ಬಿಹಾರದಲ್ಲಿ ಮಹತ್ವದ ರಾಜಕೀಯ ಬದಲಾವಣೆಯ ನಿರೀಕ್ಷೆ ಬೆನ್ನಲ್ಲೇ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಜ್ಯಪಾಲ ಫಾಗು ಚೌಹಾಣ್ ಸಂಜೆ 4ಗಂಟೆಗೆ ಭೇಟಿಯಾಗುವ ಸಾಧ್ಯತೆ ಇದೆ.
ಅದಕ್ಕೂ ಮೊದಲೇ ಬಿಜೆಪಿಯ ಸಚಿವರು ಅವರ ಭೇಟಿಗೆ ಅವಕಾಶ ಕೋರಿದ್ದಾರೆ. ಬಿಜೆಪಿಯ 16 ಸಚಿವರು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಉಪಮುಖ್ಯಮಂತ್ರಿ ಥಾರ್ ಕಿಶೋರ್ ಪ್ರಸಾದ್ ಮನೆಯಲ್ಲಿ ಸೇರಿರುವ ಬಿಜೆಪಿ ಸಚಿವರು ಅಲ್ಲಿಂದಲೇ ರಾಜಭವನಕ್ಕೆ ತೆರಳುತ್ತಾರೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಮಧ್ಯಾಹ್ನ ಜೆಡಿಯು ವರಿಷ್ಠ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮನೆಯಲ್ಲಿ ಪಕ್ಷದ ಶಾಸಕರು ಮತ್ತು ಸಂಸದರ ಸಭೆ ನಡೆಯಿತು. ಸಭೆಯಲ್ಲಿಹಾಜರಿದ್ದ ಬಹುತೇಕರು, ಬಿಜೆಪಿಯೊಂದಿಗಿನ ಮೈತ್ರಿ ಮುಂದುವರಿಸುವುದು ಬೇಡವೆಂದು ಅಭಿಪ್ರಾಯಪಟ್ಟಿರುವುದಾಗಿ ತಿಳಿದುಬಂದಿದೆ.
ಇತ್ತ, ಆರ್ಜೆಡಿ ಶಾಸಕರ ಸಭೆಯು ಪಕ್ಷದ ನಾಯಕ ತೇಜಸ್ವಿ ಯಾದವ್ ಮತ್ತು ಅವರ ತಾಯಿ ರಾಬ್ರಿ ದೇವಿ ನೇತೃತ್ವದಲ್ಲಿಸರ್ಕ್ಯುಲರ್ ರಸ್ತೆಯಲ್ಲಿರುವ ಅವರಬಂಗಲೆಯಲ್ಲಿ ನಡೆದಿದೆ.
ಬಿಜೆಪಿ ಮತ್ತು ಜೆಡಿಯು ಮಧ್ಯೆ ಸಂಬಂಧ ಹಳಸಿದ ಬೆನ್ನಲ್ಲೇ ಬಿಹಾರ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣಗಳು ಮುನ್ನೆಲೆಗೆ ಬಂದಿವೆ. ನಿತೀಶ್ ಕುಮಾರ್, ರಾಜ್ಯಪಾಲರ ಭೇಟಿ ಬಳಿಕ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ.