ಪುಣೆ: ಇಲ್ಲಿನ ಔಧ್ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ ಮಯೂರ್ ಮುಂಡೆ ಎಂಬವರು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ದೇಗುಲ ನಿರ್ಮಿಸಿದ್ದಾರೆ. ದೇಗುಲದಲ್ಲಿ ಮೋದಿ ಅವರ ಪ್ರತಿಮೆ ಸ್ಥಾಪಿಸಲಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಇತರ ಕಾರ್ಯಗಳಿಗಾಗಿ ಮೋದಿ ಅವರಿಗೆ ಗೌರವ ಸಲ್ಲಿಸಲು ದೇಗುಲ ನಿರ್ಮಿಸಿರುವುದಾಗಿ ಮುಂಡೆ ಹೇಳಿದ್ದಾರೆ.
‘ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲಾಗಿದೆ. ರಮಾ ಮಂದಿರ ನಿರ್ಮಾಣ, ತ್ರಿವಳಿ ತಲಾಖ್ ನಿಷೇಧಿಸಲಾಗಿದೆ’ ಎಂದು ರಿಯಲ್ ಎಸ್ಟೇಟ್ ಉದ್ಯಮಿಯೂ ಆಗಿರುವ ಮುಂಡೆ ಹೇಳಿದ್ದಾರೆ.
‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ ವ್ಯಕ್ತಿಗೆ ದೇಗುಲ ಇರಬೇಕು ಎಂದು ನಾನು ಭಾವಿಸಿದ್ದೆ. ಹೀಗಾಗಿ ನನ್ನ ಸ್ವಂತ ಜಾಗದಲ್ಲಿ ದೇವಾಲಯ ನಿರ್ಮಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.
ಜೈಪುರದಿಂದ ತರಿಸಿದ ಕೆಂಪು ಮಾರ್ಬಲ್ನಿಂದ ಮೋದಿಯವರ ಪ್ರತಿಮೆ ನಿರ್ಮಿಸಲಾಗಿದೆ. ಇದಕ್ಕೆ ಒಟ್ಟು ₹1.6 ಲಕ್ಷ ಖರ್ಚಾಗಿದೆ. ಪ್ರತಿಮೆ ಬಳಿ ಮೋದಿಯವರ ಕುರಿತ ಕವನವೊಂದನ್ನೂ ಪ್ರದರ್ಶಿಸಲಾಗಿದೆ ಎಂದಿ ಅವರು ಮಾಹಿತಿ ನೀಡಿದ್ದಾರೆ.