ಜೈಪುರ: ಸರ್ಕಾರದ ಖಜಾನೆಗೆ ₹52.8 ಕೋಟಿ ನಷ್ಟವುಂಟು ಮಾಡಿದ ಆರೋಪದ ಮೇಲೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಅಣ್ಣ ಸೇರಿ 15 ಆರೋಪಿಗಳ ವಿರುದ್ಧ ಕೇಂದ್ರ ತನಿಖಾ ದಳ (ಸಿಬಿಐ) ಶುಕ್ರವಾರ ಪ್ರಕರಣ ದಾಖಲಿಸಿದೆ.
ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳದಲ್ಲಿರುವ ಕಂಪನಿಗಳು, ಅದರ ನಿರ್ದೇಶಕರು, ಮಾಲೀಕರು, ಪಾಲುದಾರರು ಮತ್ತು ಇತರ ಅಪರಿಚಿತರ ವಿರುದ್ಧ ಸಿಬಿಐ ಕೇಸು ದಾಖಲಿಸಿದೆ.
ಸಿಬಿಐನ ಎಫ್ಐಆರ್ನಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಅಣ್ಣ ಅಗ್ರಸೇನ ಗೆಹಲೋತ್ ಅವರನ್ನು ಹೆಸರಿಸಲಾಗಿದೆ. ಅಗ್ರಸೇನ ರಸಗೊಬ್ಬರ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
'ಮ್ಯೂರಿಯೇಟ್ ಆಫ್ ಪೊಟ್ಯಾಶ್ (ಎಂಒಪಿ)' ರಾಸಾಯಾನಿಕದ ವಿತರಣೆಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದ್ದು, ಅದನ್ನು ಮುಚ್ಚಿಹಾಕಲು ರಾಜಸ್ಥಾನ, ಕೋಲ್ಕತ್ತದಲ್ಲಿ ತಪ್ಪು ಲೆಕ್ಕ ಸೃಷ್ಟಿ ಮಾಡಲಾಗಿತ್ತು. 2007ರಿಂದ 2009ರ ಅವಧಿಯಲ್ಲಿ ಎಕ್ಸೈಸ್ ಅಧಿಕಾರಗಳೊಂದಿಗೆ ಸೇರಿ ಸಂಚು ರೂಪಿಸಲಾಗಿದೆ. ಇದರಿಂದ ಸರ್ಕಾರಕ್ಕೆ ₹52.8 ಕೋಟಿ ನಷ್ಟವುಂಟಾಗಿದೆ’ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ರಾಜಸ್ಥಾನ, ಗುಜರಾತ್ ಮತ್ತು ಪಶ್ಚಿಮ ಬಂಗಾಳದಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಸುಮಾರು 15 ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.