ನವದೆಹಲಿ: ಎಸ್ಬಿಐ ನೇತೃತ್ವದ ಒಕ್ಕೂಟದಲ್ಲಿರುವ 10 ಬ್ಯಾಂಕುಗಳಿಗೆ ಒಟ್ಟು ₹3,269 ಕೋಟಿ ವಂಚಿಸಿದ ಆರೋಪದ ಮೇಲೆ ದೆಹಲಿ ಮೂಲದ ಶಕ್ತಿಭೋಗ್ ಫುಡ್ಸ್ ಲಿ. ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಶುಕ್ರವಾರ ಹೇಳಿದೆ.
ಎಸ್ಬಿಐ ನೀಡಿದ ದೂರಿನ ಅನ್ವಯ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೇವಲ್ ಕೃಷ್ಣಕುಮಾರ್, ನಿರ್ದೇಶಕರಾದ ಸಿದ್ಧಾರ್ಥಕುಮಾರ್, ಸುನಂದಾ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
24 ವರ್ಷ ಹಳೆಯ ಕಂಪನಿಯಾದ ಶಕ್ತಿಭೋಗ್ ಫುಡ್ಸ್, ಗೋದಿ ಹಿಟ್ಟು, ಬಿಸ್ಕತ್ತುಗಳು ಸೇರಿದಂತೆ ವಿವಿಧ ಖಾದ್ಯ ಪದಾರ್ಥಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದೆ.
‘ಬ್ಯಾಂಕಿನಿಂದ ಪಡೆದ ಸಾಲವನ್ನು ಮರುಪಾವತಿ ಮಾಡಬಾರದು ಎಂಬ ಉದ್ದೇಶದಿಂದ ಸುಳ್ಳು ಲೆಕ್ಕಪತ್ರ ಹಾಗೂ ತಿರುಚಿದ ದಾಖಲೆಗಳನ್ನು ಸಲ್ಲಿಸುವ ಮೂಲಕ ಕಂಪನಿ ವಂಚಿಸಿದೆ’ ಎಂದು ಎಸ್ಬಿಐ ದೂರಿನಲ್ಲಿ ತಿಳಿಸಿದೆ.