ನವದೆಹಲಿ: ಜಾರಿ ನಿರ್ದೇಶನಾಲಯವು (ಇ.ಡಿ) ಅನಗತ್ಯವಾಗಿ ತೊಂದರೆ ಕೊಡುತ್ತಿದ್ದು, ಈ ರೀತಿಯಿಂದ ದೇಶವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ 2021-22ರಲ್ಲಿ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಇ.ಡಿ ದೇಶದಾದ್ಯಂತ 40 ಸ್ಥಳಗಳಲ್ಲಿ ದಾಳಿ ನಡೆಸಿದೆ.
ಪ್ರತಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಕೇಜ್ರಿವಾಲ್, ಬಿಜೆಪಿ ಆರೋಪ ಮಾಡುತ್ತಿರುವ ಅಬಕಾರಿ ಹಗರಣ ಏನೆಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರೊಬ್ಬರು ₹8000 ಕೋಟಿ ಹಗರಣ ನಡೆದಿದೆ ಎಂದು ಆಪಾದಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ₹144 ಕೋಟಿ ಹಗರಣ ಎಂದು ಹೇಳುತ್ತಾರೆ. ಸಿಬಿಐ ಎಫ್ಐಆರ್ನಲ್ಲಿ ₹1 ಕೋಟಿ ಹಗರಣ ಎಂದು ಉಲ್ಲೇಖವಾಗಿದೆ. ನಿಜಕ್ಕೂ ಮದ್ಯದ ಹಗರಣ ಏನೆಂಬುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.