ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಶುಕ್ರವಾರ ಆರಂಭಿಸಿತು.
ಈ ಪ್ರಕರಣದ ತನಿಖೆಗೆ ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದ ಬೆನ್ನಲ್ಲೇಮುಂಬೈಗೆ ಬಂದಿಳಿದ ಸಿಬಿಐ ಅಧಿಕಾರಿಗಳ ತಂಡ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ, ವರದಿಗಳನ್ನುಮುಂಬೈ ಪೊಲೀಸರಿಂದ ಸಂಗ್ರಹಿಸಿತು.
ಸಾಂತಾಕ್ರೂಜ್ ಪ್ರದೇಶದಲ್ಲಿರುವ ಐಎಎಫ್ನ ಅತಿಥಿಗೃಹದಲ್ಲಿ ಅಧಿಕಾರಿಗಳ ತಂಡ ವಾಸ್ತವ್ಯ ಹೂಡಿದೆ. ಸುಶಾಂತ್ ಸಿಂಗ್ ಮನೆಯ ಬಾಣಸಿಗನನ್ನು ಅತಿಥಿಗೃಹಕ್ಕೆ ಕರೆಸಿಕೊಂಡ ಅಧಿಕಾರಿಗಳು, ವಿಚಾರಣೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿ ಹಲವು ಜನರ ಹೇಳಿಕೆಗಳನ್ನು ಸಹ ದಾಖಲಿಸಿಕೊಂಡರು.
ಮತ್ತೊಂದು ತಂಡ ಬಾಂದ್ರಾ ಪೊಲೀಸ್ ಠಾಣೆಗೆ ತೆರಳಿ, ಪ್ರಕರಣಕ್ಕೆ ಸಂಬಂಧಪಟ್ಟ ವರದಿಗಳು, ಮಹತ್ವದ ದಾಖಲೆಗಳನ್ನು ಸಂಗ್ರಹಿಸಿತು. ಮುಂಬೈ ಪೊಲೀಸರು ಕೈಗೊಂಡಿದ್ದ ತನಿಖೆಯ ನೇತೃತ್ವ ವಹಿಸಿದ್ದ ಡಿಸಿಪಿ ಅಭಿಷೇಕ್ ತ್ರಿಮುಖೆ ಅವರನ್ನೂ ತಂಡ ಭೇಟಿ ಮಾಡಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ: ಸಹೋದರಿ ವಿಚಾರಣೆ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಪ್ರಿಯಾಂಕಾ ಸಿಂಗ್ ಅವರ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ದಾಖಲಿಸಿಕೊಂಡಿದೆ.
ಇ.ಡಿ ಈಗಾಗಲೇ ಸುಶಾಂತ್ ತಂದೆ ಕೆ.ಕೆ. ಸಿಂಗ್ ಮತ್ತು ಇನ್ನೊಬ್ಬ ಸಹೋದರಿ ಮೀತು ಸಿಂಗ್ ಅವರನ್ನು ವಿಚಾರಣೆ ನಡೆಸಿದೆ.ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ದಾಖಲಾಗಿರುವ ಪ್ರಕರಣ ಸಂಬಂಧ ಪ್ರಶ್ನಿಸಲಾಯಿತು.