ನವದೆಹಲಿ: ದೆಹಲಿಯ ಲುಟಿಯನ್ಸ್ನಲ್ಲಿ ಮಹಾತ್ವಾಂಕ್ಷೆಯ ಸೆಂಟ್ರಲ್ ವಿಸ್ತಾ ಯೋಜನೆಯ ಭಾಗವಾಗಿ ಉಪರಾಷ್ಟ್ರಪತಿಗಳ ಹೊಸ ನಿವಾಸದ ನಿರ್ಮಾಣಕ್ಕೆ ಭೂಬಳಕೆಯ ಬದಲಾವಣೆಯನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ಭವನ ನಿರ್ಮಾಣದ ಭೂ ಬಳಕೆಯ ಬದಲಾವಣೆ ಸಮರ್ಥಿಸಲು ಸಂಬಂಧಿಸಿದ ಅಧಿಕಾರಿಗಳು ಸಾಕಷ್ಟು ವಿವರಣೆಯನ್ನು ನೀಡಿದ್ದಾರೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.
‘ವಿಷಯವನ್ನು ಮತ್ತೆ ಪರಿಶೀಲಿಸುವ ಯಾವುದೇ ಕಾರಣವು ನಮಗೆ ಗೋಚರಿಸುತ್ತಿಲ್ಲ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಇದನ್ನು ಅಂತ್ಯಗೊಳಿಸುತ್ತಿದ್ದೇವೆ’ ಎಂದು ಪೀಠ ಹೇಳಿದೆ.
ನ್ಯಾಯಮೂರ್ತಿಗಳಾದ ಎ.ಎನ್.ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು.
2019ರ ಸೆಪ್ಟೆಂಬರ್ನಲ್ಲಿ ಘೋಷಿಸಲಾದ ಸೆಂಟ್ರಲ್ ವಿಸ್ತಾ ಪರಿಷ್ಕರಣೆ ಯೋಜನೆಯು 900 ರಿಂದ 1200 ಸಂಸದರಿಗೆ ಆಸನ ಸಾಮರ್ಥ್ಯದ ಹೊಸ ತ್ರಿಕೋನ ಸಂಸತ್ ಕಟ್ಟಡವನ್ನು ನಿರ್ಮಿಸುವುದಾಗಿದೆ. ಇದನ್ನು ದೇಶವು ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ 2022ರ ಆಗಸ್ಟ್ ವೇಳೆಗೆ ನಿರ್ಮಿಸುವ ಯೋಜನೆಯಿದೆ.
ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ಮನರಂಜನಾ ಪ್ರದೇಶದ ಭೂಮಿಯನ್ನು ವಸತಿ ಪ್ರದೇಶವಾಗಿ ಬದಲಾಯಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು.