ನವದೆಹಲಿ: ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಪಡೆಯುವ ಅನುದಾನವನ್ನು ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ ಎಂದಿರುವ ಸುಪ್ರೀಂಕೋರ್ಟ್, ಅದು ರಾಜ್ಯದ ಆರ್ಥಿಕ ಇತಿ–ಮಿತಿಗಳಿಗೆ ಒಳಪಟ್ಟ ನೀತಿ ನಿರೂಪಣಾ ವಿಷಯವಾಗಿದೆ ಎಂದು ಹೇಳಿದೆ.
ಅನುದಾನಿತ ಸಂಸ್ಥೆಗಳ ವಿಷಯಕ್ಕೆ ಬಂದಾಗ ಅದು ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತವಲ್ಲದ ಸಂಸ್ಥೆಗಳ ನಡುವೆ ಯಾವುದೇ ವ್ಯತ್ಯಾಸ ಇರಬಾರದು ಎಂದು ನ್ಯಾಯಾಲಯ ತಿಳಿಸಿದೆ.
ಅನುದಾನದ ನಿರ್ಧಾರವು ಸರ್ಕಾರದ ನೀತಿಯನ್ನು ಅನುಸರಿಸುತ್ತದೆ. ಹೀಗೆ ಮಾಡುವಾಗ ಸರ್ಕಾರವು ಶಿಕ್ಷಣ ಸಂಸ್ಥೆಯ ಹಿತಾಸಕ್ತಿಯ ಜತೆಗೆ ತನ್ನ ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅಧ್ಯಕ್ಷತೆಯ ಪೀಠ ಹೇಳಿತು.
ಅನುದಾನವನ್ನು ಹಿಂಪಡೆಯುವ ಕುರಿತು ಸರ್ಕಾರ ನೀತಿಯ ಮೂಲಕ ನಿರ್ಧಾರ ತೆಗೆದುಕೊಂಡಲ್ಲಿ, ಯಾವುದೇ ಶಿಕ್ಷಣ ಸಂಸ್ಥೆಯು ಅನುದಾನ ಪಡೆಯುವುದನ್ನು ತನ್ನ ಹಕ್ಕು ಎಂದು ಪ್ರಶ್ನಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅನುದಾನಿತ ಶಾಲೆಗಳ 4ನೇ ತರಗತಿಯ ಸಿಬ್ಬಂದಿ ನೇಮಕಾತಿಯನ್ನು ರದ್ದುಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ 2018ರ ನವೆಂಬರ್ 19ರಂದು ಅಸಾಂವಿಧಾನಿಕ ಎಂದು ಘೋಷಿಸಿ ತೀರ್ಪು ನೀಡಿತ್ತು. ನ್ಯಾಯಮೂರ್ತಿ ಎಂ. ಎಂ. ಸುಂದ್ರೇಶ್ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಪೀಠವು ಅಲಹಾಬಾದ್ ಹೈಕೋರ್ಟ್ನ ತೀರ್ಪನ್ನು ಬದಿಗಿರಿಸಿತು.