ಪೋರ್ಟ್ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ಪ್ರದೇಶದ ಕರಾವಳಿ ಕಾವಲು ಪಡೆಯ ಕಮಾಂಡರ್ (ಸಿಒಎಂಸಿಜಿ) ಇನ್ಸ್ಪೆಕ್ಟರ್ ಜನರಲ್ ದಿನೇಶ್ ರಾಜಪುತ್ರನ್ ಅವರು ದ್ವೀಪದ ದಕ್ಷಿಣ ಭಾಗದಲ್ಲಿರುವ ದ್ವೀಪ ಸಮೂಹಗಳಿಗೆ ಭೇಟಿ ನೀಡಿ, ಕರಾವಳಿ ತೀರದ ಭದ್ರತಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಾವಲು ಪಡೆ ನಡೆಸಿರುವ ಸಿದ್ಧತೆಯ ಪರಿಶೀಲನೆ ನಡೆಸಿದ್ದಾರೆ.
ಕ್ಯಾಂಪಬೆಲ್ ಕೊಲ್ಲಿಯಲ್ಲಿರುವ ಕರಾವಳಿ ಕಾವಲು ಪಡೆ ಜಿಲ್ಲಾ ಮುಖ್ಯ ಕಚೇರಿಗೆ ಗುರುವಾರ ಭೇಟಿ ನೀಡಿದ ರಾಜಪುತ್ರನ್ ಅವರಿಗೆ, ಕಚೇರಿಯ ಅಧಿಕಾರಿಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ನಿಕೋಬಾರ್ ಜಿಲ್ಲೆಯ ದ್ವೀಪ ಸಮೂಹಗಳಲ್ಲಿ ಕರಾವಳಿ ಕಾವಲು ಪಡೆ ಕೈಗೊಂಡಿರುವ ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕರಾವಳಿ ತೀರದ ರಕ್ಷಣೆಗಾಗಿ ಆಧುನಿಕ ಕಣ್ಗಾವಲು ತಂತ್ರಜ್ಞಾನದ ಜತೆಗೆ, ನೀರಿನ ಒಳಗೆ ಬಳಸುವ ’ರಿಮೋಟ್ ಆಪರೇಟೆಡ್ ವೆಹಿಕಲ್’ ಪ್ರಾತ್ಯಕ್ಷಿಕೆಯನ್ನು ಅಧಿಕಾರಿಗಳು ಪ್ರದರ್ಶಿಸಿದರು. ಡ್ರೋನ್ ರೀತಿ ರಿಮೋಟ್ ತಂತ್ರಜ್ಞಾನದಲ್ಲಿ ಕೆಲಸ ಮಾಡುವ ಈ ವಾಹನ ನೀರಿನಲ್ಲಿ 100 ಮೀಟರ್ ಆಳದವರೆಗೆ ಹಗಲು ಮತ್ತು ರಾತ್ರಿ ವೇಳೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಸುಮಾರು 4 ಕಿ.ಮೀ. ವ್ಯಾಪ್ತಿಯಲ್ಲಿ ಗುಪ್ತಚರ, ಕಣ್ಗಾವಲು ಮತ್ತು ಮರುಪರಿಶೀಲನೆ (ಐಎಸ್ಆರ್) ಒಳಗೊಂಡ ಕಾರ್ಯಾಚರಣೆ ನಡೆಸಲಿದೆ.
ಅಂಡಮಾನ್ ಮತ್ತು ನಿಕೋಬಾರ್ನಲ್ಲಿರುವ 572 ದ್ವೀಪಗಳು ಸೇರಿದಂತೆ ಉತ್ತರದ ಲ್ಯಾಂಡ್ಫಾಲ್ ದ್ವೀಪದಿಂದ ದಕ್ಷಿಣದ ಇಂದಿರಾ ಪಾಯಿಂಟರ್ವರೆಗಿನ ಸಂಪೂರ್ಣ ಕರಾವಳಿಯು ಕರಾವಳಿ ಕಾವಲು ಪಡೆ ಕಮಾಂಡರ್ನ ಆಡಳಿತಾತ್ಮಕ ನಿಯಂತ್ರಣದಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.