ಹೈದರಾಬಾದ್: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೈದರಾಬಾದ್ನಲ್ಲಿ ಮಂಗಳವಾರ 'ಭಾರತ್ ಜೋಡೊ ಯಾತ್ರೆ'ಗೆ ಜೊತೆಯಾದರು. ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಯಾತ್ರೆಯಲ್ಲಿ ಪಾಲ್ಗೊಂಡರು.
ನೆಕ್ಲೆಸ್ ರೋಡ್ನ ಇಂದಿರಾ ಗಾಂಧಿ ಅವರ ಪ್ರತಿಮೆ ಬಳಿ ನಡೆದ ಸಭೆಯಲ್ಲಿ ಖರ್ಗೆ ಅವರು ಹಾಜರಾದರು.
ಚಾರ್ಮಿನಾರ್ನಲ್ಲಿ ರಾಹುಲ್ ಗಾಂಧಿ ಅವರು ತ್ರಿವರ್ಣ ಧ್ವಜಾರೋಹಣ ಮಾಡಿದ ಬಳಿಕ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಜೊತೆ ನೆಕ್ಲೆಸ್ ರೋಡ್ನತ್ತ ಹೆಜ್ಜೆ ಹಾಕಿದರು. ವೇದಿಕೆಯಲ್ಲಿ ಖರ್ಗೆ ಅವರನ್ನು ರಾಹುಲ್ ಅಪ್ಪಿಕೊಂಡು ಯಾತ್ರೆಗೆ ಬರಮಾಡಿಕೊಂಡರು.
ಅಕ್ಟೋಬರ್ 16ರಂದು ಬಳ್ಳಾರಿಯಲ್ಲಿ ಯಾತ್ರೆ ಸಾಗುತ್ತಿದ್ದಾಗ ಖರ್ಗೆ ಅವರು ಹೆಜ್ಜೆ ಹಾಕಿದ್ದರು. ಮರುದಿನ ಖರ್ಗೆ ಮತ್ತು ಶಶಿ ತರೂರ್ ನಡುವೆ ಪಕ್ಷದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆದಿತ್ತು.
ಹೈದರಾಬಾದ್ನ ಬಹದೂರ್ಪುರದ ಲೆಗಸಿ ಪ್ಯಾಲೆಸ್ನಲ್ಲಿ ಮಧ್ಯಾಹ್ನ ಬಿಡುವು ಮಾಡಿಕೊಳ್ಳಲಾಗಿತ್ತು. ಬಳಿಕ ಶಂಶಾಬಾದ್ನ ಮಾತಾ ದೇವಸ್ಥಾನದಿಂದ ನಡಿಗೆ ಪುನಃ ಆರಂಭಗೊಂಡಿತು. ಬೊವೆನ್ಪಲ್ಲಿಯ ಗಾಂಧಿ ಐಡಿಯಾಲಜಿ ಸೆಂಟರ್ನಲ್ಲಿ ಯಾತ್ರೆ ತಂಗಲಿದೆ.