ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡಲು ನಿಖರ ಮತ್ತು ಯೋಜಿತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಮೂಲಕ ಸಂಘಟಿತ ಪ್ರಯತ್ನಗಳನ್ನು ಮುಂದುವರಿಸುವಂತೆ ಗೃಹ ಸಚಿವ ಅಮಿತ್ ಶಾ ಗುರುವಾರ ಭದ್ರತಾ ಪಡೆಗಳಿಗೆ ನಿರ್ದೇಶಿಸಿದರು.
ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಉಗ್ರರು, ಪ್ರತ್ಯೇಕತಾವಾದಿಗಳಿಗೆ ನೆರವು ನೀಡುವವರನ್ನು ಮತ್ತು ಬೆಂಬಲಿಸುವವರನ್ನು ಒಳಗೊಂಡಿರುವ ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ಬುಡಸಹಿತ ಕಿತ್ತುಹಾಕುವ ಅಗತ್ಯವಿದೆ ಎಂದು ಹೇಳಿದರು.
ಭದ್ರತಾ ಪಡೆಗಳು ಮತ್ತು ಪೊಲೀಸರ ಸಹಾಯದಿಂದ ಜಮ್ಮು ಮತ್ತು ಕಾಶ್ಮೀರದ ಜನರು ‘ಪ್ರಾಕ್ಸಿ ಯುದ್ಧ’ವನ್ನು ನಿರ್ಣಾಯಕವಾಗಿ ಸೋಲಿಸುವರು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.