ಭೋಪಾಲ್ (ಪಿಟಿಐ): ಮಧ್ಯಪ್ರದೇಶದ ಚಂಬಲ್ ಮತ್ತು ಗ್ವಾಲಿಯರ್ ವಲಯದಲ್ಲಿ ಮಳೆ ಮತ್ತು ಪ್ರವಾಹದಿಂದ ಸಂಭವಿಸಿದ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 24ಕ್ಕೆ ಏರಿದೆ.
ಪರಿಸ್ಥಿತಿ ಸುಧಾರಿಸುತ್ತಿದೆ. ಸದ್ಯ ಆತಂಕದ ಸ್ಥಿತಿ ಇಲ್ಲ. ಹಾನಿ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ನಡೆದಿದೆ. ಆಗಸ್ಟ್ 1 ರಿಂದ 7ರ ನಡುವೆ ಮಳೆ, ಪ್ರವಾಹ ಎದುರಾಗಿತ್ತು ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿ ಜ್ಞಾನೇಶ್ವರ್ ಪಾಟೀಲ್ ತಿಳಿಸಿದ್ದಾರೆ.
ಗ್ವಾಲಿಯರ್, ಶಿವಪುರಿ, ಶಿಯೊಪುರ್, ದಾಟಿಯಾ, ಅಶೋಕ್ ನಗರ, ಗುಣ, ಭಿಂಡ್ ಮತ್ತು ಮೊರೆನಾ ಜಿಲ್ಲೆಗಳಲ್ಲಿ ಮಳೆ, ಪ್ರವಾಹದ ಪರಿಣಾಮ ತೀವ್ರವಾಗಿತ್ತು. 1,250 ಗ್ರಾಮಗಳ ಇದರ ಪರಿಣಾಮಕ್ಕೆ ಗುರಿಯಾಗಿದ್ದವು ಎಂದು ತಿಳಿಸಿದರು.
ಈ ಮಧ್ಯೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಪ್ರವಾಹ ಪೀಡಿತ ಪ್ರದೇಶಗಳಿಂದ 8,832 ಜನರನ್ನು ರಕ್ಷಿಸಲಾಗಿದ್ದು, 29,280 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.