ನವದೆಹಲಿ: ಅಧಿಕಾರ ದುರುಪಯೋಗ ಹಾಗೂ ಲಂಚ ಪಡೆದ ಆರೋಪಗಳನ್ನು ಎದುರಿಸುತ್ತಿದ್ದ ದೆಹಲಿ ನಗರಪಾಲಿಕೆಯ (ಎಂಸಿಡಿ) ಆರು ಜನ ಅಧಿಕಾರಿಗಳನ್ನು ಅಮಾನತುಗೊಳಿಸಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಅದೇಶಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸೂಪರಿಂಟೆಂಡೆಂಟ್ ಎಂಜಿನಿಯರ್ ಎ.ಎಸ್.ಯಾದವ್, ಆಡಳಿತಾಧಿಕಾರಿ ಮನೀಶ್ಕುಮಾರ್, ಡೆಪ್ಯುಟಿ ಕಂಟ್ರೋಲರ್ ಆಫ್ ಅಕೌಂಟ್ಸ್ ಅಂಜು ಭೂತಾನಿ, ಇನ್ಸ್ಪೆಕ್ಟರ್ (ದಕ್ಷಿಣ ವಲಯ) ವಿಜಯಕುಮಾರ್, ಕಿರಿಯ ಎಂಜಿನಿಯರ್ ಸಾಂಖ್ಯ ಮಿಶ್ರಾ ಹಾಗೂ ಸಹಾಯಕ ಎಂಜಿನಿಯರ್ ಶ್ರೀನಿವಾಸ ಅಮಾನತುಗೊಂಡವರು.
ಕರೋಲ್ ಬಾಗ್ನಲ್ಲಿನ ಅನಧಿಕೃತ ನಿರ್ಮಾಣಗಳನ್ನು ಸಕ್ರಮಗೊಳಿಸಿದ ಆರೋಪ ಎದುರಿಸುತ್ತಿದ್ದ, ಆಸೀಫ್ ಅಲಿ ರಸ್ತೆ ಶಾಖೆಯ ಸಬ್ ರಜಿಸ್ಟ್ರಾರ್–3 ರಾಜ್ ಪಾಲ್ ವಿರುದ್ಧ ಸಿಬಿಐ ತನಿಖೆ ನಡೆಸಲು ಸಕ್ಸೇನಾ ಅವರು ಅನುಮತಿಯನ್ನು ನೀಡಿದ್ದಾರೆ ಎಂದೂ ಹೇಳಿದ್ದಾರೆ.
ಎಂಸಿಡಿ ಅಧಿಕಾರಿಗಳು, ದೆಹಲಿ ಸರ್ಕಾರ ಹಾಗೂ ದೆಹಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಕುರಿತ ದೂರುಗಳಿಗೆ ಸಂಬಂಧಿಸಿದಂತೆ, ಅಗತ್ಯಕ್ಕೆ ಅನುಗುಣವಾಗಿಯೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ಹೇಳಿವೆ.