ನವದೆಹಲಿ: ದಕ್ಷಿಣ ದೆಹಲಿಯ ತಿಹಾರ್ ಜೈಲಿಗೆ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ದಂತ ವೈದ್ಯನನ್ನು ಬಂಧಿಸಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಜೈಲಿನ ಕೈದಿ ವಿಕಾಸ್ ಝಾ ಮತ್ತು ಜೈಲಿಗೆ ಭೇಟಿ ನೀಡಿದ್ದ ದಂತ ವೈದ್ಯ ಡಾ. ವರುಣ್ ಗೋಯಲ್ ಬಳಿ ತಂಬಾಕು ಮತ್ತು ಗಾಂಜಾ ವಶಪಡಿಸಿಕೊಂಡಿರುವುದಾಗಿ ಬುಧವಾರ ಜೈಲಿನ ಅದಿಕಾರಿಗಳಿಂದ ನಮಗೆ ಮಾಹಿತಿ ಸಿಕ್ಕಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಜೈಲಿನೊಳಗೆ ತಂಬಾಕು ಮತ್ತು ಗಾಂಜಾ ತಂದಿದ್ದ ಗೋಯಲ್ ಅದನ್ನು ಕೈದಿ ಝಾಗೆ ಹಸ್ತಾಂತರಿಸಿದ್ದರು. ಇದನ್ನು ಗಮನಿಸಿದ ಜೈಲಿನ ಸಿಬ್ಬಂದಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಡಿಸಿಪಿ ಘನಶ್ಯಾಮ್ ಬನ್ಸಾಲ್ ಹೇಳಿದ್ಧಾರೆ.
ಇಬ್ಬರ ಬಳಿಯಿಂದಲೂ ಒಟ್ಟು 82 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಡಾ. ವರುಣ್ ಗೋಯಲ್ ಅವರು, ತಿಹಾರ್ ಜೈಲಿನಲ್ಲಿ ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ವೈದ್ಯನನ್ನು ಬಂಧಿಸಲಾಗಿದ್ದು, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.