ನವದೆಹಲಿ: ‘ಮಾಂಸಾಹಾರವು ನಿಷೇಧಿತ ಆಹಾರ ಪದ್ಧತಿಯಲ್ಲ. ಅದನ್ನು ನಿಷೇಧಿಸಬಾರದು. ಆದರೆ, ಗೋಮಾಂಸ ಸೇವನೆಯನ್ನು ಮಾತ್ರ ನಿಷೇಧಿಸಬೇಕು’ ಎಂದು ಆರ್ಎಸ್ಎಸ್ನ ಬೌಧಿಕ ವಿಭಾಗ ‘ಪ್ರಗ್ಯಾ ಪ್ರವಾಹ್’ನ ಮುಖ್ಯಸ್ಥ ಜೆ. ನಂದ ಕುಮಾರ್ ಬುಧವಾರ ಅಭಿಪ್ರಾಯಪಟ್ಟರು.
‘ಇದು ನನ್ನ ವೈಯಕ್ತಿಕ ಅಭಿಪ್ರಾಯ. ನನ್ನ ಈ ಅಭಿಪ್ರಾಯಕ್ಕೂ ಸಂಘಕ್ಕೂ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದರು.
‘ಸಾಮಾನ್ಯ ಜನರು ಮಾಂಸಾಹಾರ ಸೇವಿಸುತ್ತಾರೆ. ಇದನ್ನು ನಿಷೇಧಿಸಿ ಎಂದು ಹೇಳುವುದು ಸರಿಯಲ್ಲ. ಭೌಗೋಳಿಕ ಸಂರಚನೆಯ ಹಿನ್ನೆಲೆಯಲ್ಲಿ ಜನರು ಆಹಾರ ಸೇವಿಸುತ್ತಾರೆ.ಕರಾವಳಿ ಪ್ರದೇಶದ ಜನರು ಮತ್ತು ಈಶಾನ್ಯ ಭಾಗದ ಜನರು ಮಾಂಸಾಹಾರವನ್ನೇ ಸೇವಿಸುತ್ತಾರೆ. ಇದು ಅವರ ‘ಪ್ರಧಾನ ಆಹಾರ’ವಾಗಿದೆ’ ಎಂದರು.
‘ಗೋಮಾಂಸ ಸೇವಿಸಬಾರದು ಎನ್ನುವುದಕ್ಕೆ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಕಾರಣಗಳಿವೆ. ಆದ್ದರಿಂದ ಗೋಮಾಂಸವನ್ನು ಸೇವಿಸಬಾರದು’ ಎಂದರು.