ನವದೆಹಲಿ:ಕಪ್ಪು ಶಿಲೀಂಧ್ರ ಪ್ರಕರಣಗಳಲ್ಲಿ ಉಚಿತ ಆರೈಕೆ ಮತ್ತು ಅಗತ್ಯ ಪ್ರಮಾಣದ ಔಷಧ ಒದಗಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಕಪ್ಪು ಶಿಲೀಂಧ್ರ ರೋಗಿಗಳಿಗೆ ಸದ್ಯ ಆಯುಷ್ಮಾನ್ ಭಾರತ್ ಯೋಜನೆಯಡಿ ಸೇವೆ ದೊರೆಯುತ್ತಿಲ್ಲ. ಅಲ್ಲದೆ, ಬಹುತೇಕ ಆರೋಗ್ಯ ವಿಮಾ ಯೋಜನೆಗಳ ಕುರಿತು ಈ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಲಿಪೊಸೊಮಲ್ ಅಂಪೊಟೆರಿಸಿನ್ ಬಿ ಔಷಧ ಅಗತ್ಯ ಎಂಬ ಮಾಹಿತಿ ಇದೆ. ಆದರೆ, ಇದು ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲ ಎಂಬ ವರದಿಗಳಿವೆ ಎಂದು ಗಮನ ಸೆಳೆದಿದ್ದಾರೆ.
ಈ ಮಧ್ಯೆ, ಬಿಜೆಪಿಯ ಹಿರಿಯ ನಾಯಕ ಪ್ರಕಾಶ್ ಜಾವಡೇಕರ್ ಅವರು, ಸರ್ಕಾರ ಈಗಾಗಲೇ ಕಪ್ಪು ಶಿಲೀಂಧ್ರ ನಿರೋಧಕ ಔಷಧಗಳ ಆಮದಿಗೆ ಕ್ರಮವಹಿಸಿದೆ ಹಾಗೂ ದೇಶೀಯವಾಗಿ ಉತ್ಪಾದಿಸಲು ಐದು ಕಂಪನಿಗಳಿಗೆ ಲೈಸೆನ್ಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.