ಲಖನೌ: ‘ರೈತರು ದೇಶದ ಹೆಮ್ಮೆ. ಬಿಜೆಪಿಯವರು ಪ್ರತಿಭಟನಾ ನಿರತ ರೈತರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು‘ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದರು.
‘ರೈತರ ದಿನ’ವೂ (ಕಿಸಾನ್ ದಿವಸ್) ಆಗಿರುವ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಅವರು ಹಿಂದಿಯಲ್ಲಿ ಈ ರೀತಿ ಟ್ವೀಟ್ ಮಾಡಿದ್ದಾರೆ.
‘ಬಿಜೆಪಿ ಆಡಳಿತದಲ್ಲಿ ರೈತರು ಇಂದು ಬೀದಿಯಲ್ಲಿ ಕುಳಿತು ‘ರೈತರ ದಿನ‘ವನ್ನು ಆಚರಿಸುವಂತಾಗಿದೆ. ಹೋರಾಟಕ್ಕೆ ಇಳಿದಿರುವ ರೈತರನ್ನು ಬಿಜೆಪಿ ಅವಮಾನಿಸುವುದನ್ನು ನಿಲ್ಲಿಸಬೇಕು. ಏಕೆಂದರೆ, ರೈತರು ಭಾರತದ ಹೆಮ್ಮೆ‘ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಮೀರತ್ನಲ್ಲಿ 1902ರಲ್ಲಿ ಜನಿಸಿದ ಚರಣ್ ಸಿಂಗ್ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ರೈತ ನಾಯಕರಾಗಿ ಹೊರ ಹೊಮ್ಮಿದರು. ಹಲವಾರು ಕೃಷಿ ಸ್ನೇಹಿ ನೀತಿಗಳನ್ನು ರೂಪಿಸಿದ ಸಿಂಗ್ ಅವರು 1987ರಲ್ಲಿ ನಿಧನರಾದರು.