ಮುಂಬೈ: ಶಿವಸೇನಾದ ಉದ್ಧವ್ ಠಾಕ್ರೆ ಬಣದಲ್ಲಿ ಗುರುತಿಸಿಕೊಂಡಿದ್ದ ಮಹಾರಾಷ್ಟ್ರದ ಮಾಜಿ ಶಾಸಕ ಕೃಷ್ಣ ಹೆಗ್ಡೆ ಅವರು ಮಂಗಳವಾರ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಸೇರ್ಪಡೆಗೊಂಡಿದ್ದಾರೆ.
ಐದು ವರ್ಷಗಳ ಹಿಂದೆ ಹೆಗ್ಡೆ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಶಿವಸೇನಾ, ‘ಮಹಾ ವಿಕಾಸ ಅಘಾಡಿ’ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಹೆಗ್ಡೆ ಅವರು ಶಿವಸೇನಾಗೆ ಸೇರ್ಪಡೆಗೊಂಡಿದ್ದರು. ಅವರು ಉದ್ಧವ್ ಠಾಕ್ರೆ ಬಣದಲ್ಲಿ ಸಕ್ರಿಯರಾಗಿದ್ದರು.
ಸೋಮವಾರ ರಾತ್ರಿ ಹೆಗ್ಡೆ ಅವರು ಬಾಳಾಸಾಹೇಬಾಚಿ ಶಿವಸೇನಾದ ಮುಖ್ಯಸ್ಥರೂ ಆಗಿರುವ ಏಕನಾಥ ಶಿಂದೆ ಅವರನ್ನು ಭೇಟಿಯಾಗಿ ಅವರ ಬಣಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಳಿಕ ಮಾತನಾಡಿದ ಹೆಗ್ಡೆ ಅವರು, ‘ನನ್ನನ್ನು ಬಾಳಾಸಾಹೇಬಾಚಿ ಶಿವಸೇನಾದ ವಕ್ತಾರರನ್ನಾಗಿ ಆಯ್ಕೆ ಮಾಡಿರುವುದಕ್ಕೆ ಶಿಂದೆ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೂ ಧನ್ಯವಾದ ತಿಳಿಸಿದ್ದಾರೆ.