ಜೈಪುರ: ಬಸ್ಸೊಂದು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಫತೇಘರ್ ಬಳಿ ಈ ಘಟನೆ ಸಂಭವಿಸಿದ್ದು, ಸರ್ಕಾರಿ ಸಾರಿಗೆ ಬಸ್ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಸರ್ವಾದ್ ಠಾಣಾಧಿಕಾರಿ ಸೂರ್ಯಭಾನ್ ಸಿಂಗ್ ಹೇಳಿದ್ದಾರೆ.
ಮೃತರನ್ನು 4 ತಿಂಗಳ ಮಗು ಖುಷಿ, ಲಕ್ಷ್ಮಿ ಗುರ್ಜಾರ್(28), ಆಕೆಯ ಸಹೋದರ ಲಕ್ಷ್ಮಣ್ ಗುರ್ಜಾರ್(25) ಮತ್ತು ಗಣೇಶ್ ಭಿಲ್(26) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಅಜ್ಮೀರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರ್ಕಾರಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.