ಶಾಂತಿ ಪ್ರಕ್ರಿಯೆಯನ್ನು ಅಫ್ಗಾನಿಸ್ತಾನವೇ ನಿಯಂತ್ರಿಸಬೇಕು: ಪ್ರಧಾನಿ ಮೋದಿ

ನವದೆಹಲಿ: ‘ಅಫ್ಗಾನ್ ಶಾಂತಿ ಪ್ರಕ್ರಿಯೆಗೆ ಅಫ್ಗಾನಿಸ್ತಾನವೇ ನೇತೃತ್ವವಹಿಸಬೇಕು ಹಾಗೂ ನಿಯಂತ್ರಿಸಬೇಕು. ಎರಡು ದಶಕದಲ್ಲಿ ಆದ ಸಾಧನೆಯನ್ನು ಸಂರಕ್ಷಿಸುವುದು ಅಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದರು.
ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕಾತ್ ಮಿರ್ಜಿಯೊಯಿವ್ ಅವರು ಉಪಸ್ಥಿತರಿದ್ದ ಶೃಂಗಸಭೆಯಲ್ಲಿ ಆನ್ಲೈನ್ ಮುಖಾಂತರ ಭಾಗವಹಿಸಿದ ಮೋದಿ, ‘ಭಯೋತ್ಪಾದನೆ ವಿರುದ್ಧ ಭಾರತ ಹಾಗೂ ಉಜ್ಬೇಕಿಸ್ತಾನ್ ಸದೃಢವಾಗಿ ನಿಂತಿದೆ. ಮತೀಯವಾದ, ಪ್ರತ್ಯೇಕತಾವಾದ ಹಾಗೂ ತೀವ್ರವಾದದ ವಿರುದ್ಧವೂ ಸಮಾನವಾದ ಕಳವಳವನ್ನು ಎರಡೂ ರಾಷ್ಟ್ರಗಳು ಹೊಂದಿವೆ. ಅಫ್ಗಾನಿಸ್ತಾನದಲ್ಲಿ ಮತ್ತೆ ಶಾಂತಿಯನ್ನು ತರುವ ಪ್ರಕ್ರಿಯೆಯಲ್ಲಿ, ಅಫ್ಗಾನಿಸ್ತಾನವೇ ಇದರ ನೇತೃತ್ವ ಹಾಗೂ ನಿಯಂತ್ರಣವನ್ನು ಹೊಂದಿರುವುದರ ಅವಶ್ಯಕತೆ ಇದೆ’ ಎಂದರು.
ಶಾಂತಿ ಪ್ರಕ್ರಿಯೆಯ ಕುರಿತು ಕೆಲ ತಿಂಗಳ ಹಿಂದಷ್ಟೇ ಅಫ್ಗಾನಿಸ್ತಾನದ ಶಾಂತಿ ಮಂಡಳಿಯ ಮುಖ್ಯಸ್ಥ ಅಬ್ದುಲ್ಲಾ ಅಬ್ದುಲ್ಲಾ ಅವರು ಮೋದಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಶಾಂತಿ ಪ್ರಕ್ರಿಯೆಗೆ ಬೆಂಬಲ ಪಡೆಯುವ ಉದ್ದೇಶದಿಂದ ಅಫ್ಗಾನಿಸ್ತಾನದ ಹಲವು ನಾಯಕರು ಇತ್ತೀಚೆಗೆ ಭಾರತ ಪ್ರವಾಸ ಕೈಗೊಂಡಿದ್ದರು. ಇದರ ಬೆನ್ನಲ್ಲೇ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.
ಉಜ್ಬೇಕಿಸ್ತಾನದ ಜೊತೆ ಅಭಿವೃದ್ಧಿ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸುವ ಇಚ್ಛೆ ಭಾರತಕ್ಕಿದೆ ಎಂದು ತಿಳಿಸಿದ ಮೋದಿ ಅವರು, ‘ಭದ್ರತಾ ವಿಭಾಗದಲ್ಲಿ ನಮ್ಮ ಪಾಲುದಾರಿಕೆಯು ದ್ವಿಪಕ್ಷೀಯ ಸಂಬಂಧದ ಪ್ರಮುಖ ಆಧಾರ ಸ್ತಂಭವಾಗಿದೆ. ಕಳೆದ ವರ್ಷ ಎರಡೂ ರಾಷ್ಟ್ರಗಳ ಸೇನೆಯು ಜಂಟಿ ಸಮರಾಭ್ಯಾಸ ನಡೆಸಿವೆ. ಬಾಹ್ಯಾಕಾಶ ಹಾಗೂ ಅಣು ಇಂಧನ ಕ್ಷೇತ್ರದಲ್ಲಿ ನಮ್ಮ ಜಂಟಿ ಪಾಲುದಾರಿಕೆ ಹೆಚ್ಚಾಗುತ್ತಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.