ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿರುವ ತಮ್ಮ ಪಕ್ಷದ ಅಭ್ಯರ್ಥಿಯನ್ನು ಬಿಜೆಪಿ ಅಪಹರಿಸಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
‘ಎಎಪಿ ಅಭ್ಯರ್ಥಿ ಕಾಂಚನ್ ಜರಿವಾಲ ಅವರನ್ನು ಬಿಜೆಪಿ ಅಪಹರಣ ಮಾಡಿದೆ‘ ಎಂದು ಮನೀಷ್ ಸಿಸೋಡಿಯಾ ಬುಧವಾರ ತಿಳಿಸಿದ್ದಾರೆ.
ಕಾಂಚನ್ ಅವರು ಸೂರತ್ (ಪೂರ್ವ) ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
Our candidate from Surat (East), Kanchan Jariwala, and his family missing since yesterday. First, BJP tried to get his nomination rejected. But his nomination was accepted. Later, he was being pressurised to withdraw his nomination.
ಗುಜರಾತ್ ಚುನಾವಣೆಯಲ್ಲಿ ಬಿಜೆಪಿಗೆ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಅಪಹರಣ ಮಾಡಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
‘ಕಾಂಚನ್ ಹಾಗೂ ಅವರ ಕುಟುಂಬ ನಿನ್ನೆಯಿಂದ ಕಾಣೆಯಾಗಿದೆ. ಅವರು ತಮ್ಮ ನಾಮಪತ್ರ ಪರಿಶೀಲನೆಗೆಂದು ಹೋಗಿದ್ದರು. ಪ್ರಕ್ರಿಯೆ ಮುಗಿಸಿ ಕಚೇರಿಯಿಂದ ಹೊರಬರುವಾಗ ಬಿಜೆಪಿಯ ಗೂಂಡಾಗಳು ಅವರನ್ನು ಅಪಹರಿಸಿದ್ದಾರೆ. ಈಗ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಇಲ್ಲ‘ ಎಂದು ಸಿಸೋಡಿಯಾ ಹೇಳಿದ್ದಾರೆ.
‘ಈ ಘಟನೆ ಅಪಾಯಕಾರಿ. ಇದು ಅಭ್ಯರ್ಥಿಯೊಬ್ಬರ ಅಪಹರಣ ಮಾತ್ರವಲ್ಲ, ಪ್ರಜಾಪ್ರಭುತ್ವದ ಅಪಹರಣ‘ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಹಲವು ಎಎಪಿ ನಾಯಕರು ಕಾಂಚನ್ ಅವರನ್ನು ಅಪಹರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.