ತಿರುವನಂತಪುರಂ: ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕೇರಳದ ಆರು ಜಿಲ್ಲೆಗಳಲ್ಲಿ ’ಆರೆಂಜ್ ಅಲರ್ಟ್’ ಘೋಷಿಸಿದೆ. ರಾಜ್ಯದ ವಿವಿಧೆಡೆ ಶುಕ್ರವಾರ ರಾತ್ರಿಯಿಂದ ನಿರಂತರ ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ, ಕೆಲವೆಡೆ ಸಣ್ಣ ಪ್ರಮಾಣ ಭೂಕುಸಿತ ಉಂಟಾಗಿದೆ.
ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ,ಅಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಿದೆ. ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ವಯನಾಡ್ ಮತ್ತು ಕಾಸರಗೋಡು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ.
ನವೆಂಬರ್ 16ರವರೆಗೆ ಗುಡುಗು ಸಹಿತ ಮಳೆಯಾಗಬಹುದು ಎಂದು ತಿಳಿಸಿದೆ. ನಿರಂತರ ಮಳೆಯಿಂದಾಗಿ ತಿರುವನಂತಪುರಂ ಜಿಲ್ಲೆಯಲ್ಲಿ ಭಾರಿ ನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ. ನಾಗರಿಕರಿಗೆ ಜಾಗ್ರತೆಯಿಂದ ಇರಲು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ತಿರುವನಂತಪುರಂ–ನಾಗರಕೊಯಿಲ್ ರೈಲ್ವೆ ಹಳಿಗಳ ಮೇಲೆ ಮಣ್ಣು ಸುರಿದಿದೆ. ನೆಯ್ಯತ್ತಿನಕರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ ಭಾಗಶಃ ಕೊಚ್ಚಿ ಹೋಗಿದೆ. ಕಾಲುವೆ ಉಕ್ಕಿ ಹರಿದಿದ್ದು, ವಿಝಿಂಜಂನ ಕರಾವಳಿ ತೀರದಲ್ಲಿ ಅಂಗಡಿಗಳಿಗೆ ನೀರು ನುಗ್ಗಿದೆ.
ನೀರಿನ ಹರಿವು ಹೆಚ್ಚಿದ್ದು, ಅರುವಿಕ್ಕರ ಮತ್ತು ಪೆಪ್ಪಾರ ಅಣೆಕಟ್ಟಿನಿಂದನೀರು ಹೊರಬಿಡಲಾಗುತ್ತಿದೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.ಅಣೆಕಟ್ಟುವಿನ ಅಚ್ಚುಕಟ್ಟು ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.