ಇಟಾನಗರ: ತವಾಂಗ್ ಸೆಕ್ಟರ್ನ ವಾಸ್ತವ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿ ಭಾರತ ಮತ್ತು ಚೀನಾ ನಡುವೆ ನಡೆದಿರುವ ಗಡಿ ಘರ್ಷಣೆ ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಅಡ್ಡಿಯುಂಟು ಮಾಡುತ್ತದೆ ಎಂದು ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಪಿರ್ ಗಾವೊ ತಿಳಿಸಿದ್ದಾರೆ.
‘ಡಿಸೆಂಬರ್ 9 ರ ಘಟನೆಯ ಬಗ್ಗೆ ಕೇಳಿದಾಗ ನನಗೆ ನೋವಾಯಿತು. ನಾನು ಇದನ್ನು ಖಂಡಿಸುತ್ತೇನೆ. ಭವಿಷ್ಯದಲ್ಲಿ ಚೀನಾ ಸೇನೆ ಇಂತಹ ಕೃತ್ಯಗಳನ್ನು ಮುಂದುವರಿಸುತ್ತಾ ಹೋದರೆ ಭಾರತ-ಚೀನಾ ಸಂಬಂಧಗಳು ಹದಗೆಡುತ್ತವೆ’ ಎಂದು ಸೋಮವಾರ ವಿಡಿಯೊ ಸಂದೇಶದಲ್ಲಿ ಅವರು ಹೇಳಿದ್ದಾರೆ.
‘ಭಾರತ ಮತ್ತು ಚೀನಾ ಸರ್ಕಾರಗಳು ಸಂಬಂಧಗಳನ್ನು ಉತ್ತಮಗೊಳಿಸುವತ್ತ ಕೆಲಸ ಮಾಡಬೇಕು’ ಎಂದು ಅರುಣಾಚಲ ಪೂರ್ವ ಕ್ಷೇತ್ರದ ಲೋಕಸಭಾ ಸಂಸದ ಗಾವೊ ಹೇಳಿದರು.
‘ಡಿಸೆಂಬರ್ 9 ರಂದು, ಚೀನಾದ ಪಡೆಗಳು ತವಾಂಗ್ ಸೆಕ್ಟರ್ನಲ್ಲಿನ ವಾಸ್ತವ ಗಡಿ ರೇಖೆ ಸಮೀಪಿಸಿದ್ದವು. ಭಾರತೀಯ ಯೋದರು ಅವರಿಗೆ ಸೂಕ್ತ ತಿರುಗೇಟು ಕೊಟ್ಟು ಹಿಂದಕ್ಕಟ್ಟಿದರು. ಈ ಮುಖಾಮುಖಿ ಕಾಳಗದಲ್ಲಿ ಎರಡೂ ಕಡೆ ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಸೇನೆ ಹೇಳಿದೆ.