ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಸೈನಿಕರ ಸಂಘರ್ಷ

ಎರಡೂ ಕಡೆಯವರಿಗೆ ಗಾಯ lಪರಿಸ್ಥಿತಿ ಈಗ ಶಾಂತ
Last Updated 12 ಡಿಸೆಂಬರ್ 2022, 20:09 IST
ಅಕ್ಷರ ಗಾತ್ರ

ನವದೆಹಲಿ:ಅರುಣಾಚಲ ಪ್ರದೇಶದಲ್ಲಿನ ತವಾಂಗ್‌ ವಲಯದ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಭಾರತದ ಸೈನಿಕರು ಮತ್ತು ಚೀನಾ ಸೈನಿಕರ ಮಧ್ಯೆ ಈಚೆಗೆ ಸಂಘರ್ಷ ನಡೆದಿದೆ. ಸಂಘರ್ಷದಲ್ಲಿ ಎರಡೂ ಕಡೆಯ ಸೈನಿಕರಿಗೆ ಗಾಯಗಳಾಗಿವೆ ಎಂದು ಭಾರತೀಯ ಸೇನೆಯು ಹೇಳಿದೆ.

ಪಶ್ಚಿಮ ಲಡಾಖ್‌ನ ಗಾಲ್ವಾನ್‌ ಕಣಿವೆ ಮತ್ತು ಪ್ಯಾಂಗಾಂಗ್‌ ಸರೋವರದ ಬಳಿ ನಡೆದಿದ್ದ ದೀರ್ಘಾವಧಿ ಸಂಘರ್ಷದ ನಂತರ ನಡೆದ ಮೊದಲ ಸಂಘರ್ಷ ಇದಾಗಿದೆ.

‘ತವಾಂಗ್‌ ವಲಯದಲ್ಲಿನ ಯಾಂಗ್‌ಟ್ಸೆ ಬಳಿ ಡಿಸೆಂಬರ್ 9ರಂದು ಚೀನಾದ ಸೈನಿಕರು ಎಲ್‌ಎಸಿಯನ್ನು ದಾಟಿ ಬಂದಿದ್ದರು. ಆದರೆ ಅಲ್ಲಿಯೇ ಇದ್ದ ನಮ್ಮ ಸೈನಿಕರು ಇದನ್ನು ಪ್ರತಿಭಟಿಸಿದರು. ಇದರಿಂದ ಎರಡೂ ಕಡೆಯ ಸೈನಿಕರ ಮಧ್ಯೆ ಸಂಘರ್ಷ ನಡೆಯಿತು. ಎರಡೂ ಕಡೆಯವರಿಗೆ ಸಣ್ಣ–ಪುಟ್ಟ ಗಾಯಗಳಾದವು’ ಎಂದು ಸೇನೆಯ ಪ್ರಕಟಣೆ ಹೇಳಿದೆ.

ಎರಡೂ ಕಡೆಯ ಎಷ್ಟು ಸೈನಿಕರಿಗೆ ಗಾಯಗಳಾಗಿವೆ ಎಂಬ ಮಾಹಿತಿಯನ್ನು ಸೇನೆಯು ನೀಡಿಲ್ಲ. ಆದರೆ, ಚೀನಾ ಸೈನಿಕರಿಗೆ ಹೆಚ್ಚಿನ ಗಾಯಗಳಾಗಿವೆ ಎಂದು ಮೂಲಗಳು ಹೇಳಿವೆ.

‘ಕೆಲವೇ ಸಮಯದಲ್ಲಿ ಎರಡೂ ಕಡೆಯ ಸೈನಿಕರು ಸಂಘರ್ಷವನ್ನು ನಿಲ್ಲಿಸಿದ್ದಾರೆ. ನಂತರ ಎರಡೂ ಕಡೆಯವರು ಕಮಾಂಡರ್ ಮಟ್ಟದ ಸಭೆ ನಡೆಸಿದ್ದಾರೆ. ಸಂಘರ್ಷ ತಡೆಯಲು ಮತ್ತು ಶಾಂತಿ ಕಾಪಾಡಲು ಇರುವ ಸಿದ್ಧಕ್ರಮಗಳನ್ನು ಪಾಲಿಸಲಾಗಿದೆ’ ಎಂದು ಸೇನೆಯು ವಿವರಿಸಿದೆ.

‘ತವಾಂಗ್‌ ವಲಯದಲ್ಲಿ ಹಾದು ಹೋಗುವ ಎಲ್‌ಎಸಿ ಬಗ್ಗೆ ಎರಡೂ ದೇಶಗಳ ಮಧ್ಯೆ ಸಹಮತವಿಲ್ಲ. ಹೀಗಾಗಿ ಚೀನಾ ತನ್ನದೆಂದು ಹೇಳಿಕೊಳ್ಳುವ ಪ್ರದೇಶದವರೆಗೂ ಗಸ್ತು ನಡೆಸುತ್ತದೆ. ನಮ್ಮ ಸೈನಿಕರೂ, ನಾವು ನಮ್ಮದೆಂದು ಪ್ರತಿಪಾದಿಸುವ ಪ್ರದೇಶದವರೆಗೆ ಗಸ್ತು ನಡೆಸುತ್ತಾರೆ. 2006ರವರೆಗೂ ಇಂತಹ ಸ್ಥಿತಿ ಇರಲಿಲ್ಲ. 2006ರ ನಂತರ ಚೀನಾ ಸೈನಿಕರು ಹೀಗೆ ಮಾಡುತ್ತಿದ್ದಾರೆ. ಹೀಗೆ ಎರಡೂ ಕಡೆಯ ಸೈನಿಕರು ಎದುರು ಬದುರಾದಾಗ ಚಕಮಕಿ ನಡೆಯುತ್ತದೆ’ ಎಂದು ಸೇನೆಯು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT