ನವದೆಹಲಿ: ‘‘ಕೋವಿಡ್ 19 ಸೋಂಕಿನ ಪ್ರಕರಣಗಳ ಹೆಚ್ಚಳ, ಗಡಿ ಸಮಸ್ಯೆ, ಜಿಡಿಪಿ ಕುಸಿತ ಸೇರಿದಂತೆ ‘ಮೋದಿ ಸೃಷ್ಟಿಸಿರುವ ವಿಪತ್ತುಗಳಿಂದ’ ಭಾರತ ತತ್ತರಿಸಿದೆ’’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇಶದ ಜಿಡಿಪಿ ಶೇ 23.9ರಷ್ಟು ಕುಸಿತ ಕಂಡಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ, ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಅವರು ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿ ಆರೋಪಗಳು 1) ಇತಿಹಾದಲ್ಲೇ ಮೊದಲಬಾರಿಗೆ ಜಿಡಿಪಿ ಶೇ 23.9ರಷ್ಟು ಕುಸಿತಕಂಡಿದೆ. 2) ದೇಶದ 45 ವರ್ಷಗಳ ಇತಿಹಾಸದಲ್ಲೇ ಅತಿ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದೆ. 3) 12 ಕೋಟಿಗಳಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. 4) ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಡಬೇಕಾದ ಜಿಎಸ್ಟಿ ಪರಿಹಾರದ ಹಣ ಉಳಿಸಿಕೊಂಡಿದೆ. 5) ವಿಶ್ವದಲ್ಲೇ ನಿತ್ಯ ಅತಿ ಹೆಚ್ಚು ಕೋವಿಡ್ 19 ಸೋಂಕಿತ ಪ್ರಕರಣಗಳು ಮತ್ತು ಅದರಿಂದ ಸಾವುಗಳು ಸಂಭವಿಸುತ್ತಿವೆ. 6) ಗಡಿಯಲ್ಲಿ ವಿದೇಶದವರ ಉಪಟಳ ಹೆಚ್ಚಾಗಿದೆ’ ಎಂದು ಆರೋಪಗಳ ಪಟ್ಟಿ ಮಾಡಿದ್ದಾರೆ.