ನವದೆಹಲಿ: ಛಾಯಾಚಿತ್ರ, ವಿಡಿಯೊ ಮತ್ತು ನವ ಮಾಧ್ಯಮಗಳ ವಿಭಾಗದಲ್ಲಿನ ಅತ್ಯುತ್ತಮ ಕಾರ್ಯಕ್ಕೆ ದಕ್ಷಿಣ ಏಷ್ಯಾದಲ್ಲೇ ಅತಿ ಹೆಚ್ಚಿನ ಮೊತ್ತ ನೀಡುವ ‘ಸೆರೆಂಡಿಪಿಟಿ ಅರ್ಲೆಸ್ ಗ್ರಾಂಟ್’ಗೆ (ಎಸ್ಎಜಿ)ಗೆ ಕಂಚಿಪುರಂನ ಪುರುಷೋತ್ತಮನ್ ಸತೀಶ್ ಕುಮಾರ್ ಆಯ್ಕೆಯಾಗಿದ್ದಾರೆ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳಿಂದ ಆಯ್ಕೆ ಮಾಡಲಾಗಿದ್ದ 10 ಛಾಯಾಚಿತ್ರಗಾರರ ಪಟ್ಟಿಯಿಂದ ಅಂತಿಮವಾಗಿ ಪುರುಷೋತ್ತಮನ್ ಸತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.
2020–21ನೇ ಸಾಲಿಗೆ ಕುಮಾರ್ ಆಯ್ಕೆಯಾಗಿದ್ದು, ₹12 ಲಕ್ಷ ಮೊತ್ತವನ್ನು ಪಡೆಯಲಿದ್ದಾರೆ. ಈ ಮೊತ್ತದಲ್ಲಿ ಅವರು ತಮ್ಮ ಛಾಯಾಚಿತ್ರಕ್ಕೆ ಸಂಬಂಧಿಸಿದ ಯೋಜನೆಯನ್ನು ಸಿದ್ಧಪಡಿಸಿ ಫ್ರಾನ್ಸ್ನಲ್ಲಿ 2022ರಲ್ಲಿ ನಡೆಯುವ ವಾರ್ಷಿಕ ಬೇಸಿಗೆ ಛಾಯಾಚಿತ್ರ ಉತ್ಸವದಲ್ಲಿ ಪ್ರಸ್ತುತ ಪಡಿಸಬೇಕು.
ಅಂತಿಮಪಟ್ಟಿಗೆ ಆಯ್ಕೆಯಾದ ಉಳಿದ 9 ಮಂದಿಗೂ ’ಪ್ರೊಡಕ್ಷನ್’ ಅನುದಾನ ದೊರೆಯಲಿದೆ. ಇವರು ಮುಂದಿನ ಸೆರೆಂಡಿಪಿಟಿ ಕಲಾ ಉತ್ಸವದಲ್ಲಿ ತಮ್ಮ ಛಾಯಾಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.