ತುಲ್ಮುಲ್ಲಾ (ಜಮ್ಮು–ಕಾಶ್ಮೀರ): ಬಿಗಿ ಭದ್ರತೆಯ ನಡುವೆ ಬುಧವಾರ ಕಾಶ್ಮೀರ ಪಂಡಿತ ಸಮುದಾಯದನೂರಾರು ಯಾತ್ರಾರ್ಥಿಗಳು ಇಲ್ಲಿನ ಗಂದರ್ಬಾಲ್ನ ಪ್ರಸಿದ್ಧ ರಾಗ್ನ್ಯಾ ದೇವಿ ದೇವಸ್ಥಾನದಲ್ಲಿ ವಾರ್ಷಿಕ ಖೀರ್ ಭವಾನಿ ಮೇಳದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಕಣಿವೆ ರಾಜ್ಯದಲ್ಲಿ ಇತ್ತೀಚೆಗೆ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಹತ್ಯೆಯ ಕಾರಣ, ಯಾತ್ರಾರ್ಥಿಗಳಿಗೆ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಮೇಳ ನಡೆದಿರಲಿಲ್ಲ.
ಬರಿಗಾಲಿನಲ್ಲಿ ದೇಗುಲಕ್ಕೆ ತೆರಳಿದ ಭಕ್ತರು ಗುಲಾಬಿ ದಳಗಳನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ದೇಗುಲದ ಆವರಣದೊಳಗಿನ ಪವಿತ್ರ ಬುಗ್ಗೆಯಲ್ಲಿ ಹಾಲು ಮತ್ತು ಕಡುಬಿನ ನೈವೇದ್ಯ ಸಮರ್ಪಿಸಿದರು. ದೇಗುಲದ ಕೆಳಗೆ ಹರಿಯುವ ಪವಿತ್ರ ಬುಗ್ಗೆಯಲ್ಲಿನ ನೀರಿನ ಬಣ್ಣವು ಕಣಿವೆಯ ಭವಿಷ್ಯವನ್ನು ಸೂಚಿಸುತ್ತದೆ ಎಂಬ ನಂಬಿಕೆ ಭಕ್ತರದ್ದು.
‘ಈ ಬಾರಿ ನೀರಿನ ಬಣ್ಣವು ಹಾಲಿನ ಬಣ್ಣದ್ದಾಗಿತ್ತು. ಇದು ಮುಂಬರುವ ದಿನಗಳಲ್ಲಿ ಕಾಶ್ಮೀರಕ್ಕೆ ಒಳ್ಳೆಯದಾಗುವ ಮುನ್ಸೂಚನೆ’ ಎಂದು ದೇವಿಯ ಭಕ್ತ ವಿವೇಕ್ ಭಟ್ ಭರವಸೆ ವ್ಯಕ್ತಪಡಿಸಿದರು.