ನಾಗಪುರ: ಇಲ್ಲಿ ನಡೆದ ಅನಾಥ ಹಾಗೂ ವಾಕ್, ಶ್ರವಣ ದೋಷವಿರುವ ಯುವಕ– ಯುವತಿಯ ವಿವಾಹ ನಿಶ್ಚಿತಾರ್ಥದಲ್ಲಿ ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶ್ಮುಖ್ ದಂಪತಿ ವಧುವಿನ ತಂದೆ–ತಾಯಿಯಾಗಿ ಹಾಗೂ ನಾಗಪುರದ ಜಿಲ್ಲಾಧಿಕಾರಿ ರವೀಂದ್ರ ಠಾಕ್ರೆ ಮತ್ತು ಅವರ ಪತ್ನಿ ವರನ ತಂದೆ–ತಾಯಿಯಾಗಿ ಪಾಲ್ಗೊಂಡರು.
23 ವರ್ಷಗಳ ಹಿಂದೆ ನಾಗಪುರ ರೈಲ್ವೆ ನಿಲ್ದಾಣದಲ್ಲಿ ಅನಾಥವಾಗಿದ್ದ ಹೆಣ್ಣು ಮಗುವನ್ನು ರಕ್ಷಿಸಿದ ಸಮಾಜ ಸೇವಕ ಶಂಕರಬಾಬಾ ಪಾಪಲ್ಕರ್ ಅವರು, ಅಮರಾವತಿ ಜಿಲ್ಲೆಯ ಅನಾಥಾಶ್ರಮದಲ್ಲಿ ಬೆಳೆಸಿದರು. ಆ ಹೆಣ್ಣು ಮಗುವೇ ಈ ವಿವಾಹ ಮಹೋತ್ಸವದ ವಧು.
ಇದೇ ರೀತಿ ಇಪ್ಪತ್ತೈದು ವರ್ಷಗಳ ಹಿಂದೆ ಠಾಣೆ ಜಿಲ್ಲೆಯ ದೊಂಬಿವಿಲಿ ಪಟ್ಟಣದಲ್ಲಿ ಸಿಕ್ಕಿದ ಎರಡು ವರ್ಷದ ಬಾಲಕನನ್ನು ರಕ್ಷಿಸಿದ ಪಾಪಲ್ಕರ್,ಇದೇ ಅನಾಥಶ್ರಮದಲ್ಲಿ ಬೆಳೆಸಿದರು. ಆ ಬಾಲಕನೇ ಈಗ ಮದುವೆಯಾದ 27 ವರ್ಷದ ವರ. ಇವರಿಬ್ಬರ ವಿವಾಹ ಮಹೋತ್ಸವ ಇದೇ 20ರಂದು ನಾಗಪುರದಲ್ಲಿ ನಡೆಯಲಿದೆ.
ವಿವಾಹ ಮಹೋತ್ಸವಕ್ಕೆ ಮುನ್ನ ಸಚಿವ ದೇಶಮುಖ್ ಅವರ ಅಳಿಯ, ಜಿಲ್ಲಾಧಿಕಾರಿ ಠಾಕ್ರೆ ಮತ್ತು ವಧು–ವರರನ್ನು ನಗರದಲ್ಲಿರುವ ತಮ್ಮ ಮನೆಗೆ ಆತಿಥ್ಯಕ್ಕಾಗಿ ಆಹ್ವಾನಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.