ನವದೆಹಲಿ:ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷರಾಗಿದ್ದ ಮಹಂತ ನರೇಂದ್ರ ಗಿರಿ ಅವರು ತಮ್ಮ ಶಿಷ್ಯರಿಂದಲೇ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದರು. ಸಮಾಜದಲ್ಲಿ ಎದುರಾಗಬಹುದಾದ ಮಾನನಷ್ಟ ಮತ್ತು ಅವಮಾನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಸಿಬಿಐ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.
ಮಹಂತ್ ಅವರು ಸಾವಿಗೂ ಮುನ್ನ ವಿಡಿಯೊವೊಂದನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ‘ನಾನು ಮಹಿಳೆಯೊಂದಿಗೆ ಆಕ್ಷೇಪಾರ್ಹ ಭಂಗಿಯಲ್ಲಿದ್ದ ತಿರುಚಿದ ವಿಡಿಯೊವೊಂದನ್ನು ಆನಂದ ಗಿರಿ ಅವರು ಬಿಡುಗಡೆ ಮಾಡಲು ಹೊರಟ್ಟಿದ್ದರು’ ಎಂದು ಮಹಂತ ಅವರು ದೂರಿದ್ದಾರೆ.
ನವೆಂಬರ್ 20ರಂದುಸಿಬಿಐ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ, ಅಲಹಾಬಾದ್ನ ಹನುಮಾನ್ ದೇವಸ್ಥಾನದ ಅರ್ಚಕ ಆನಂದ ಗಿರಿ, ಆದ್ಯ ಪ್ರಸಾದ್ ತಿವಾರಿ ಮತ್ತು ಅವರ ಮಗ ಸಂದೀಪ್ ತಿವಾರಿ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಆರೋಪವನ್ನು ಹೊರಿಸಲಾಗಿದೆ.
ಭಾರತದ ಅತಿದೊಡ್ಡ ಸಾಧುಗಳ ಸಂಘಟನೆಯ ಅಧ್ಯಕ್ಷರಾಗಿದ್ದ ನರೇಂದ್ರ ಗಿರಿ ಅವರ ಮೃತದೇಹವು ಇದೇ ಸೆಪ್ಟೆಂಬರ್ 20 ರಂದು ಅಲಹಾಬಾದ್ನ ಬಘಾಂಬರಿ ಮಠದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.